ಗೌರಿಬಿದನೂರು: ನಗರದಲ್ಲಿ ಮಂಗಳವಾರ ಜೈನ ಸಮುದಾಯದ ಮುಖಂಡರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಮೌನ ಮೆರವಣಿಗೆ ನಡೆಸಿ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದರು.
ನಗರದ ಎಂ.ಜಿ.ವೃತ್ತದಲ್ಲಿ ಜೈನ ಧರ್ಮೀಯರ ಮೌನ ಪ್ರತಿಭಟನೆಯಲ್ಲಿ ಇತರ ಸಮಾಜದ ಜನರೂ ಭಾಗವಹಿಸಿದ್ದರು. ಜೈನ ಸಮುದಾಯದವರಿಗೆ ನ್ಯಾಯ ಕೊಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿ ‘ಜೈನ ಮುನಿಗಳಿಗೆ ರಕ್ಷಣೆ ಒದಗಿಸಬೇಕು. ಇಂತಹ ಹೇಯ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ಕೊಡಬೇಕು ಎಂದು ಒತ್ತಾಯಿಸಲಾಯಿತು.
ಜೈನ ಸಮುದಾಯದ ತಾಲ್ಲೂಕು ಅಧ್ಯಕ್ಷ ದೇವಕುಮಾರ್ ಮಾತನಾಡಿ, ‘ಜೈನ ಮುನಿ ಹತ್ಯೆ ಹೇಯ ಕೃತ್ಯ. ಯಾವುದೇ ಸಮಾಜದ ಸ್ವಾಮೀಜಿಗಳಿಗೆ ಇಂಥ ಸ್ಥಿತಿ ಬರಬಾರದು. ಈ ಘಟನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಿ, ತನಿಖೆ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಬಳಿಕ ಎಲ್ಲರೂ ನಗರದ ಹೊರವಲಯದಲ್ಲಿರುವ ಮಿನಿ ವಿಧಾನಸೌಧದ ಬಳಿ ತೆರಳಿ ತಹಶೀಲ್ದಾರ್ ಮಹೇಶ್ ಎಸ್. ಪತ್ರಿ ಅವರಿಗೆ ಮನವಿ ಪತ್ರ ನೀಡಿದರು.
ಈ ವೇಳೆ ಧರಣೇಂದ್ರಯ್ಯ, ಜಯಣ್ಣ, ಎಂ.ಎಸ್.ದೇವರಾಜ್, ಎಂ.ಎನ್.ಸುರೇಶ್, ವಿಜಿಕುಮಾರ್ ಸೇರಿ ಇತರರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.