ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಮಾಡಿದ ಪಾಪದ ಕೆಲಸದಿಂದಲೇ ನಾನು ಕಾಂಗ್ರೆಸ್‌ ಬಿಟ್ಟು ಬಂದೆ: ಸುಧಾಕರ್

Last Updated 25 ಜನವರಿ 2023, 4:38 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹುಟ್ಟಿದಾಗಲೇ ಕಾಂಗ್ರೆಸ್‌ನಲ್ಲಿರಲಿಲ್ಲ. ಜನತಾದಳದಲ್ಲಿದ್ದು ಎಲ್ಲ ಅಧಿಕಾರ ಅನುಭವಿಸಿದ ಅವರು, ಅಧಿಕಾರದ ಆಸೆಗಾಗಿಯೇ ಕಾಂಗ್ರೆಸ್‌ಗೆ ಬಂದರು. ಇವರು ಮಾಡಿದ ಪಾಪದ ಕೆಲಸದಿಂದಾಗಿಯೇ ನಾನು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ತಾಲ್ಲೂಕಿನ ಅಜ್ಜವಾರದಲ್ಲಿ 494 ಕುಟುಂಬಗಳಿಗೆ ನಿವೇಶನ ಹಂಚಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ನವರು ಪ್ರಜಾ ಧ್ವನಿ ಯಾತ್ರೆಯ ಹೆಸರಿನಲ್ಲಿ ನನ್ನ ವಿರುದ್ಧ ಪ್ರಚಾರ ಸಭೆ ಮಾಡಿದ್ದಾರೆ. ಆದರೆ ನಾನು ಮಾಡಿದ ಆರೋಪಗಳಿಗೆ ಒಂದೇ ಒಂದು ಉತ್ತರ ನೀಡಲು ಕಾಂಗ್ರೆಸ್‌ ನಾಯಕರಿಗೆ ಸಾಧ್ಯವಾಗಿಲ್ಲ. ಆದರ ಬದಲಿಗೆ ವೈಯಕ್ತಿಕ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿ ಆಗಿದ್ದವರು, ಸಚಿವರಾಗಿದ್ದವರು, ಜನಪ್ರತಿನಿಧಿಗಳು ಪ್ರಜಾಪ್ರಭುತ್ವದಲ್ಲಿ ಹೇಗೆ ಮಾತಾಡಬೇಕು ಎಂದು ಮೊದಲು ಕಲಿಯಬೇಕು. ಮದ್ಯ ಸೇವಿಸಿ ಬಂದಂತೆ ಸಭೆಯಲ್ಲಿ ಮಾತನಾಡಬಾರದು ಎಂದರು.

ಕಾಂಗ್ರೆಸ್‌ನಲ್ಲಿ ನನಗೆ ಟಿಕೆಟ್‌ ದೊರೆಯುವಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇ ಇಲ್ಲ. 2013ರಲ್ಲಿ ನನಗೆ ಟಿಕೆಟ್ ಕೊಡಿಸಿದ್ದು ನನ್ನ ರಾಜಕೀಯ ಗುರುಗಳಾದ ಎಸ್‌.ಎಂ. ಕೃಷ್ಣ ಹಾಗೂ ಡಾ.ಜಿ.ಪರಮೇಶ್ವರ . ನಾನು ಸಿದ್ದರಾಮಯ್ಯ ಅವರ ಬಳಿ ಟಿಕೆಟ್‌ಗಾಗಿ ಏನೂ ಸಹಾಯ ಕೇಳಿಯೇ ಇಲ್ಲ. ಶಾಸಕನಾದ ಬಳಿಕ ನನ್ನನ್ನು ವಿಶ್ವಾಸದಿಂದ ನೋಡಿದ್ದಾರೆ. ಆಗ ನಾನೂ ಅವರನ್ನು ಸಮರ್ಥನೆ ಮಾಡಿದ್ದೆ. ಆದರೆ ತಪ್ಪು ಮಾಡಿದಾಗ ಅದನ್ನು ನೇರವಾಗಿ ಖಂಡಿಸಿದ್ದೇನೆ ಎಂದರು.

ಸಿದ್ದರಾಮಯ್ಯನವರು ಕಾಂಗ್ರೆಸ್‌ ಪಕ್ಷದಲ್ಲಿ ಮೊದಲಿನಿಂದಲೂ ಇದ್ದರೇ? ಅವರು ಮೊದಲು ಜನತಾದಳದಲ್ಲಿದ್ದರು. ಅದೇ ಪಕ್ಷದಲ್ಲಿದ್ದು ಸಚಿವ, ಉಪಮುಖ್ಯಮಂತ್ರಿ ಆದರು. ಕಾಂಗ್ರೆಸ್‌ ಗೆ ಏಕೆ ಬಂದರು? ಆಶಯಕ್ಕಾ? ಬದ್ಧತೆಗಾ? ಇವರು ಮಾತ್ರ ಬಹಳ ಪವಿತ್ರರು, ನಾವೆಲ್ಲರೂ ಅಪವಿತ್ರರಾ? ಇಷ್ಟು ವಯಸ್ಸಾಗಿರುವವರೇ ಹೀಗೆ ಮಾಡುವಾಗ, ಯುವಕರಾದವರು ನಾವೇನು ಮಾಡಬೇಕು? ಸಿದ್ದರಾಮಯ್ಯನವರು ಕಳೆದ ಚುನಾವಣೆಯಲ್ಲಿ ಗೆದ್ದ ಬಳಿಕ, ಅನೈತಿಕವಾಗಿ ಜೆಡಿಎಸ್‌ ಜೊತೆ ಸೇರಿ ಸರ್ಕಾರ ರಚಿಸಲು ನಮ್ಮನ್ನು ಬಲಿಪಶು ಮಾಡಿದ್ದರು ಎಂದರು.

ನಾನು ನನ್ನ ಫಲಿತಾಂಶ ನೋಡಿ ದೇವನಹಳ್ಳಿಗೆ ಹೋಗುವ ವೇಳೆಗೆ ಸಿದ್ದರಾಮಯ್ಯನವರು ಜನತದಾಳದ ಕೈ ಹಿಡಿದುಕೊಂಡಿದ್ದರು. ಇದು ಸರಿಯಲ್ಲ, ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಸ್ಪಷ್ಟವಾಗಿ ಹೇಳಿದ್ದೆ. ಸಿದ್ದರಾಮಯ್ಯನವರ ಮನೆಗೆ ಹೋಗಿ ಮಾತನಾಡಿದಾಗ, ರಾಹುಲ್‌ ಗಾಂಧಿಯವರ ಮಾತಿನಂತೆ ಒಪ್ಪಿಕೊಂಡು ಬಿಟ್ಟಿದ್ದೇನೆ ಎಂದು ಹೇಳಿದ್ದರು. ಆದರೆ ನಾವೇನೂ ಒಪ್ಪಿಕೊಳ್ಳಬೇಕು ಎಂದೇನಿಲ್ಲ ಎಂದರು.

ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜು ತಾವೇ ತಂದಿದ್ದು ಎಂದು ಹೇಳಿಕೊಂಡಿದ್ದಾರೆ. ಇಲ್ಲಿ ಬಂದು ಆರು ವರ್ಷದ ಮಗುವನ್ನು ಕೇಳಿದರೂ ಯಾರು ಈ ಯೋಜನೆ ತಂದಿದ್ದು ಎಂದು ಹೇಳುತ್ತದೆ. ಎಚ್‌.ಎನ್‌ ವ್ಯಾಲಿ ಬಗ್ಗೆ ಇವರಿಗೆ ಗೊತ್ತೇ ಇರಲಿಲ್ಲ. ಶಿವಶಂಕರರೆಡ್ಡಿ ಹಾಗೂ ರಮೇಶ್‌ಕುಮಾರ್‌ ಅವರಿಗೂ ಗೊತ್ತೇ ಇರಲಿಲ್ಲ. ಇದೇ ಸಿದ್ದರಾಮಯ್ಯನವರು, ಎಚ್‌.ಎನ್‌ ವ್ಯಾಲಿ ಯೋಜನೆ ಜಾರಿಯಾಗಲು ಸುಧಾಕರ್‌ ಕಾರಣ ಎಂದು ಇಲ್ಲಿಗೇ ಬಂದು ಭಾಷಣ ಮಾಡಿದ್ದರು. ಅಂದು ಒಂದು ಮಾತನಾಡುತ್ತಾರೆ, ಈಗ ಮತ್ತೊಂದು ಮಾತನಾಡುತ್ತಾರೆ. ಭಾಷಣ ಮಾಡಲಿ, ಆದರೆ ಅದರಲ್ಲಿ ಸತ್ಯ ಇರಬೇಕು ಎಂದರು.

ಅಕ್ರಮ ಪ್ರಮಾಣ ಪತ್ರ; ಶೀಘ್ರ ಜೈಲಿಗೆ
ನನ್ನ ವಿರುದ್ಧ ಅಭ್ಯರ್ಥಿ ಇಲ್ಲದೆ ಹೊರಗಿನಿಂದ ಅಭ್ಯರ್ಥಿ ಕರೆದುಕೊಂಡು ಬರಲು ಹೊರಟಿದ್ದಾರೆ. ಅಕ್ರಮವಾಗಿ ದಲಿತ ಎಂಬ ಪ್ರಮಾಣಪತ್ರ ಪಡೆದು ಶಾಸಕರಾದವರನ್ನು ನನ್ನ ವಿರುದ್ಧ ನಿಲ್ಲಿಸಲು ಮುಂದಾಗಿದ್ದಾರೆ. ಆದರೆ ಅಕ್ರಮವಾಗಿ ಪ್ರಮಾಣಪತ್ರ ಹೊಂದಿದವರು ಶೀಘ್ರದಲ್ಲೇ ಜೈಲಿಗೆ ಹೋಗುತ್ತಾರೆ ಎಂದು ಡಾ.ಕೆ.ಸುಧಾಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT