ಗೌರಿಬಿದನೂರು: ಗ್ರಾಮಗಳಲ್ಲಿ ಶಾಂತಿ ಮತ್ತು ಸೌಹಾರ್ದ ವಾತಾವರಣ ನಿರ್ಮಾಣವಾಗಬೇಕಾದರೆ ಧಾರ್ಮಿಕ ನೆಲಗಟ್ಟು ಭದ್ರವಾಗಿರಬೇಕು ಎಂದು ಕೆ.ಎಚ್.ಪಿ ಪೌಂಡೇಷನ್ ಅಧ್ಯಕ್ಷ ಕೆ.ಎಚ್.ಪುಟ್ಟಸ್ವಾಮಿಗೌಡ ತಿಳಿಸಿದರು.
ತಾಲ್ಲೂಕಿನ ಗಂಗಸಂದ್ರದಲ್ಲಿ ಕೆ.ಎಚ್.ಪಿ ಪೌಂಡೇಷನ್ನಿಂದ ನಿರ್ಮಾಣ ಮಾಡಿದ್ದ ಗ್ರಾಮದ ಹೆಬ್ಬಾಗಿಲು ಉದ್ಘಾಟಿಸಿ ಮಾತನಾಡಿದರು.
ಶತಮಾನಗಳಿಂದ ಪಾರಂಪರಿಕವಾಗಿ ಉಳಿಸಿಕೊಂಡು ಬಂದಿರುವ ಪುರಾತನವಾದ ಕುರುಹುಗಳನ್ನು ಸಂರಕ್ಷಿಸಿ ಗ್ರಾಮಕ್ಕೆ ಐತಿಹಾಸಿಕ ಮೆರಗು ನೀಡುವುದು ಪ್ರಮುಖ. ಶತಮಾನಗಳ ಹಿಂದೆ ನಿರ್ಮಾಣ ಮಾಡಿ ಶಿಥಿಲವಾಗಿದ್ದ ಗ್ರಾಮದ ಹೆಬ್ಬಾಗಿಲಿನ ಮರು ನಿರ್ಮಾಣ ಕಾರ್ಯದಿಂದ ಗ್ರಾಮಕ್ಕೆ ಮತ್ತು ಜನರಿಗೆ ಹೊಸ ಚೈತನ್ಯ ನೀಡಿದಂತಾಗಿದೆ ಎಂದರು.
ಜಿ.ಪಂ ಸದಸ್ಯ ಡಿ.ನರಸಿಂಹಮೂರ್ತಿ ಮಾತನಾಡಿ, ಗ್ರಾಮಸ್ಥರ ಮನವಿಯ ಮೇರೆಗೆ ಅವರ ಕನಸಾಗಿದ್ದ ಊರ ಹೆಬ್ಬಾಗಿಲು ನಿರ್ಮಾಣಕ್ಕೆ ಪುಟ್ಟಸ್ವಾಮಿಗೌಡರು ಸಹಾಯ ಮಾಡಿದ್ದಾರೆ ಎಂದರು.
4 ವರ್ಷಗಳ ಹಿಂದೆ ತಾಲ್ಲೂಕಿನ ಅಲಕಾಪುರದ ಬಳಿ ಸೋಲಾರ್ ಘಟಕ ಸ್ಥಾಪಿಸಲು ಈ ಭಾಗದ ಪರಿಶಿಷ್ಟರ ಜಮೀನುಗಳನ್ನು ಅಕ್ರಮವಾಗಿ ಪಡೆಯಲಾಗಿದೆ ಎಂದು ಶಾಸಕರು ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾಗಿದೆ. ಪರಿಶಿಷ್ಟರು ಮತ್ತು ರೈತರು ತಮ್ಮ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದೆ ಇದ್ದ ಭೂಮಿಯನ್ನು ಪಡೆಯುವಂತೆ ಒತ್ತಾಯಿಸಿದ್ದರು. ಅವರ ಮನವಿ ಮೇರೆಗೆ ಸರ್ಕಾರದ ಆದೇಶ ಮತ್ತು ಕಾನೂನಾತ್ಮಕವಾಗಿ ಭೂಮಿ ಪಡೆದು ಘಟಕ ನಿರ್ಮಿಸಲಾಗಿದೆ. ಇದಕ್ಕೆ ಸ್ಥಳೀಯ ಶಾಸಕರೆ ಭೂಮಿ ಪೂಜೆ ನೆರೆವೇರಿಸಿದ್ದರು. ಆದರೆ ಇದೀಗ ರಾಜಕೀಯ ವೈಮನಸ್ಸಿನಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕೆ.ಎಚ್. ಪುಟ್ಟಸ್ವಾಮಿಗೌಡ ಹೇಳಿದರು.