ಚಿಕ್ಕಬಳ್ಳಾಪುರ: ಜಾರ್ಖಂಡ್ನಲ್ಲಿ ತಬ್ರೇಜ್ ಅನ್ಸಾರಿ ಎಂಬ ಯುವಕನ ಮೇಲೆ ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಜರುಗಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಶುಕ್ರವಾರ ಮುಸ್ಲಿಮರು ಪ್ರತಿಭಟನೆ ನಡೆಸಿದರು.
ಭುವನೇಶ್ವರಿ ವೃತ್ತದಿಂದ ನಗರದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬಳಿಕ ತಾಲ್ಲೂಕು ಕಚೇರಿಗೆ ತೆರಳಿ ಉಪ ವಿಭಾಗಾಧಿಕಾರಿ ಬಿ.ಶಿವಸ್ವಾಮಿ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡ ಎಂ.ಎಂ.ಭಾಷಾ, ‘ವಿವಿಧತೆಯಲ್ಲಿ ಏಕತೆ ಮೆರೆಯುವ ದೇಶದಲ್ಲಿ ಇತ್ತೀಚಿಗೆ ಕೆಲ ಕಿಡಿಗೇಡಿಗಳು ಜಾತಿ, ಧರ್ಮಗಳ ನಡೆಯುವೆ ಕಿಡಿ ಹೊತ್ತಿಸುತ್ತಿದ್ದಾರೆ. ಗುಂಪು ಘರ್ಷಣೆಗಳು, ಹತ್ಯೆ ಪ್ರಕರಣಗಳಿಂದಾಗಿ ದಲಿತರು, ಅಲ್ಪಸಂಖ್ಯಾತರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಜಾರ್ಖಂರ್ಡ್ನಲ್ಲಿ ತಬ್ರೇಜ್ ಎಂಬ ಯುವಕನನ್ನು ಕೆಲ ಕಿಡಿಗೇಡಿಗಳು 12 ಗಂಟೆ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿ, ಹತ್ಯೆ ಮಾಡಿದ್ದಾರೆ. ಪೊಲೀಸರ ನಿರ್ಲಕ್ಷ್ಯದಿಂದಾಗಿ ತಬ್ರೇಜ್ ಬಲಿಯಾಗಿದ್ದಾರೆ. ಇಂತಹ ಘಟನೆಗಳು ಮರುಕಳುಹಿಸದಂತೆ ಕೇಂದ್ರ ಸರ್ಕಾರ ತುರ್ತಾಗಿ ಕ್ರಮಕೈಗೊಳ್ಳಬೇಕಾಗಿದೆ. ಅಲ್ಪ ಸಂಖ್ಯಾತರ ರಕ್ಷಣೆ ಸರ್ಕಾರ ಮುಂದಾಗಬೇಕಿದೆ’ ಎಂದು ಹೇಳಿದರು.
‘ಭಾರತದಲ್ಲಿ ಹಿಂದಿನಿಂದಲೂ ಎಲ್ಲ ಧರ್ಮೀಯರು ಪರಸ್ಪರ ಸಹಕಾರ ಮತ್ತು ಒಗ್ಗಟ್ಟಿನಿಂದ ಸಹೋದರರಂತೆ ಜೀವನ ನಡೆಸುತ್ತಿದ್ದಾರೆ. ಆದರೆ, ಕೆಲವರು ಕೋಮು ದ್ವೇಷ ಬಿತ್ತುತ್ತ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ’ ಎಂದು ಆರೋಪಿಸಿದರು.
‘ಗೋ ರಕ್ಷಣೆ, ಅಂತರ್ಜಾತಿ ವಿವಾಹಕ್ಕೆ ವಿರೋಧ, ಕಾರ್ಯಕ್ರಮಗಳ ಆಚರಣೆಗೆ ಅಡ್ಡಿ ಸೇರಿ ನಾನಾ ಕಾರಣಗಳ ನೆಪದಲ್ಲಿ ಗಲಾಟೆ ಮಾಡಿ ಭಯದ ವಾತಾವರಣ ನಿರ್ಮಿಸುವುದು ಸರಿಯಲ್ಲ. ಈಗಲಾದರೂ ಕಿಡಿಗೇಡಿಗಳ ಹೇಯ ಕೃತ್ಯವನ್ನು ತಡೆಯಲು ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.