ಚಿಂತಾಮಣಿ: ತಾಲ್ಲೂಕಿನ ಅಂಬಾಜಿದುರ್ಗಾ ಹೋಬಳಿಯ ಉಪ್ಪರಪೇಟೆ ಗ್ರಾಮದ ಕಸದಲ್ಲಿ ಬಿಸಾಕಿದ್ದ ನವಜಾತ ಹೆಣ್ಣು ಶಿಶುವನ್ನು ಗುರುವಾರ ಗ್ರಾಮಸ್ಥರು ರಕ್ಷಿಸಿ ಮಕ್ಕಳ ಕಲ್ಯಾಣ ಘಟಕಕ್ಕೆ ಒಪ್ಪಿಸಿದ್ದಾರೆ.
ಗ್ರಾಮದ ಬಸವೇಶ್ವರ ದೇವಾಲಯ ಪಕ್ಕದಲ್ಲಿ ನವಜಾತ ಶಿಶುವನ್ನು ಬಿಸಾಕಿ ಹೋಗಿದ್ದಾರೆ. ಇರುವೆಗಳು ಮಗುವನ್ನು ಕಚ್ಚ ತೊಡಗಿದಾಗ ಶಿಶು ಅಳತೊಡಗಿದೆ. ಅಳುವನ್ನು ಕೇಳಿಸಿಕೊಂಡ ಅಕ್ಕಪಕ್ಕದವರು ಜಮಾಯಿಸಿದಾಗ ಮಗು ಗೋಚರವಾಗಿದೆ. ಸಾಜೀದಾ ಮತ್ತು ಚಾನ್ ಎಂಬುವರು ಕೂಡಲೇ ಶಿಶುವನ್ನು ಮನೆಗೆ ತೆಗೆದುಕೊಂಡು ಸ್ನಾನ ಮಾಡಿಸಿ ರಕ್ಷಿಸಿದ್ದಾರೆ.
ಮಗುವನ್ನು ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಹಾಗೂ ಸಾಂತ್ವನ ಕೇಂದ್ರಕ್ಕೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಮಕ್ಕಳ ತಜ್ಞೆ ಡಾ.ದಾಕ್ಷಾಯಿಣಿ ಚಿಕಿತ್ಸೆ ನೀಡಿದ್ದು, ಶಿಶು ಚೇತರಿಸಿಕೊಂಡು ಆರೋಗ್ಯವಾಗಿದೆ. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಮತ್ತು ಸಾಂತ್ವನ ಕೇಂದ್ರದ ಸಿಬ್ಬಂದಿ ಆಗಮಿಸಿ ಮಗುವನ್ನು ಪಡೆದುಕೊಂಡಿದ್ದಾರೆ. ನಂತರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಘಟಕಕ್ಕೆ ಒಪ್ಪಿಸಲಾಗಿದೆ.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಅಂಬಿಕಾ, ಮಕ್ಕಳ ಸಹಾಯವಾಣಿ ತಂಡದ ಸುನೀತಾ, ಶಾಲಿನಿ, ಸಾಂತ್ವನ ಕೇಂದ್ರದ ಕಾಮಾಕ್ಷಿ, ಯಶೋದಾ ಮಗುವನ್ನು ಸುರಕ್ಷಿತವಾಗಿ ಮಕ್ಕಳ ಕಲ್ಯಾಣ ಘಟಕಕ್ಕೆ ಒಪ್ಪಿಸಿದ್ದಾರೆ.
‘ಈ ಬಗ್ಗೆ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಲಾಗುವುದು. ಮಗುವಿನ ಪೋಷಕರಿಗಾಗಿ ಹುಡುಕಾಟ ನಡೆಸಲಾಗುವುದು. ಮಕ್ಕಳ ಕಲ್ಯಾಣ ಸಮಿತಿ ಮಂದೆ ಮಗುವನ್ನು ಹಾಜರುಪಡಿಸಿ ಇಲಾಖೆಯ ನಿಯಮಗಳಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.