ಚಿಕ್ಕಬಳ್ಳಾಪುರ: ‘ವಿವಿಧ ಪಿಂಚಣಿ ಯೋಜನೆಗಳ ಮಾಸಾಶನ ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಜೂನ್ 8 ರಂದು ನಗರದಲ್ಲಿ ಕರ್ನಾಟಕ ಅಂಗವಿಕಲರ ಸಂಘಟನೆ (ಕೆವಿಎಸ್) ವತಿಯಿಂದ ತಾಲ್ಲೂಕು ಕಚೇರಿ ಎದುರು ‘ನಮ್ಮ ಪಿಂಚಣಿ ನಮ್ಮ ಹಕ್ಕು’ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಕೆವಿಎಸ್ ಕಾರ್ಯದರ್ಶಿ ಬಿ.ಕಿರಣ್ ನಾಯಕ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳುಗಳಿಂದ ಅಂಗವಿಕಲರು, ಹಿರಿಯ ನಾಗರಿಕರು, ವಿಧವೆಯರು, ಲಿಂಗತ್ವ ಅಲ್ಪ ಸಂಖ್ಯಾತರು ಹಾಗೂ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಫಲಾನುಭವಿಗಳಿಗೆ ಸರಿಯಾಗಿ ಮಾಸಾಶನ ತಲುಪುತ್ತಿಲ್ಲ’ ಎಂದು ಹೇಳಿದರು.
‘ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಮಾಸಾಶನ ಸಿಗದೆ ಇರುವುದು ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಎರಡು ತಿಂಗಳಿಂದ ಪಿಂಚಣಿ ನೀಡದೇ ಸರ್ಕಾರ ಅಸಹಾಯಕ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ಬಡ ಫಲಾನುಭವಿಗಳು ಮಾಸಾಶನಕ್ಕಾಗಿ ಕಚೇರಿಗಳಿಗೆ ಅಲೆದು ಬೇಸತ್ತು ಹೋಗಿದ್ದಾರೆ’ ಎಂದರು.
‘ಜಿಲ್ಲೆಯಲ್ಲಿರುವ ಎಲ್ಲಾ ಅಂಗವಿಕಲರಿಗೆ ಕಡ್ಡಾಯವಾಗಿ ಪ್ರತಿ ತಿಂಗಳು ಆಯಾ ತಿಂಗಳೇ ಮಾಸಾಶನ ನೀಡಬೇಕು. ರದ್ದಾಗಿರುವ ಎಲ್ಲಾ ಪಿಂಚಣಿದಾರರಿಗೆ ತಹಶೀಲ್ದಾರ್ ಕಚೇರಿಯಲ್ಲೇ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕು’ ಆಗ್ರಹಿಸಿದರು.
ಸಂಘಟನೆಯ ಗೌರವ ಅಧಕ್ಷ ಪಿ.ವಿ.ಕುಶಕುಮಾರ್, ಅಧ್ಯಕ್ಷ ಕೆ.ಜಿ. ಸುಬ್ರಮಣ್ಯಂ, ಉಪಾಧ್ಯಕ್ಷ ಜಿ.ವಿ.ವೆಂಕಟಶಿವಪ್ಪ, ಮಹಿಳಾ ಸಂಚಾಲಕಿ ಕೆ.ಸಿ. ಮಮತಾ, ಸಂಚಾಲಕರಾದ ಆರ್.ಚಂದ್ರ ಶೇಖರ್, ಎಚ್.ಎಸ್.ಕೃಷ್ಣಪ್ಪ, ಮಂಜುನಾಥ್ ಹಾಜರಿದ್ದರು.