ಮುಸ್ಲಿಂ ಸಮುದಾಯವರು ಕಿರಿಯರು-ಹಿರಿಯರು, ಬಡವರು-ಶ್ರೀಮಂತರು ಎನ್ನದೇ, ಸರತಿಸಾಲಿನಲ್ಲಿ ನಿಂತು ರಂಜಾನ್ ಹಬ್ಬದ ವಿಶೇಷ ಪ್ರಾರ್ಥನೆ ಮಾಡಿದರು. ಮಕ್ಕಳು, ಕಿರಿಯರು, ಹಿರಿಯರು ಹೊಸ ಉಡುಪುಗಳನ್ನು ಧರಿಸಿದ್ದರು. ಪರಸ್ಪರ ಆಲಿಂಗಿಸಿಕೊಂಡು ಈದ್ ಮುಬಾರಕ್ ಹಂಚಿಕೊಂಡರು. ಸುಡುಬಿಸಿಲು ಇರುವುದರಿಂದ ಕುಡಿಯುವ ನೀರಿನ ಬಾಟಲ್ಗಳ ವ್ಯವಸ್ಥೆ ಮಾಡಲಾಗಿತ್ತು. ಮನೆಗಳಲ್ಲಿ ಸಿಹಿ ತಿಂಡಿ, ತಿನಿಸು ಹಾಗೂ ಮಾಂಸದ ಬಾಡೂಟ ಸಿದ್ಧಪಡಿಸಿಕೊಂಡು ಸವಿದರು.
ಪಟ್ಟಣದ ಹಿರಿಯ ಜಾಮೀಯಾ ಮಸೀದಿಯ ಧರ್ಮಗುರು ಅಬ್ದುಲ್ ವಾಹೀದ್ ಭಾಷ ವಿಶೇಷ ಪ್ರಾರ್ಥನೆ ಮಾಡಿಸಿ, ‘ಶಾಂತಿ, ಸಹನೆ, ಸಹಬಾಳ್ವೆಯಿಂದ ಇರಬೇಕು. ಸಾಮರಸ್ಯ, ಸೌಹಾರ್ದತೆಯಿಂದ ಕೂಡಿರಬೇಕು. ಹಬ್ಬದಲ್ಲಿ ಒಂದು ತಿಂಗಳು ಕಾಲ ಕಠಿಣ ಉಪವಾಸ, 5 ಹೊತ್ತು ಪ್ರಾರ್ಥನೆ ಮಾಡಲಾಗಿದೆ. ಪವಿತ್ರ ಕುರಾನ್ ಹಾಗೂ ರಂಜಾನ್ನ ಮಹತ್ವ ತಿಳಿದು, ಬದುಕಬೇಕು’ ಎಂದರು.
ನಂತರ ಈದ್ಗಾ ಮೈದಾನದ ಬಳಿ ಇರುವ ಮುಸ್ಲಿಂ ಸಮುದಾಯದವರು ಸಮಾಧಿಗಳ ಸುತ್ತಲೂ ಬೆಳೆದ ಮುಳ್ಳು-ಕಳೆ ಗಿಡಗಳನ್ನು ಸ್ವಚ್ಛಗೊಳಿಸಿದರು. ತಮ್ಮ ಅಗಲಿದ ಕುಟುಂಬಸ್ಥರ ಸಮಾಧಿಗಳಿಗೆ ಮುಂದೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.