ಚಿಕ್ಕಬಳ್ಳಾಪುರ: ರೈತ ಉತ್ಪಾದಕ ಸಂಘಗಳ (ಪಿಎಫ್ಒ) ರಚನೆ ಸಂಬಂಧ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಗುರುವಾರ ಸಭೆನಡೆಯಿತು.
ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ನವೀನ್ ಮಾತನಾಡಿ, ಜಿಲ್ಲಾ ರೈತ ಮೋರ್ಚಾ ಪದಾಧಿಕಾರಿಗಳು ತಮ್ಮ ಹೋಬಳಿ ಮಟ್ಟದಲ್ಲಿ ರೈತರಿಗೆ ಸಭೆಗಳನ್ನು ನಡೆಸಬೇಕು. ಎಫ್ಪಿಒ ರಚನೆ ಮತ್ತು ಅವುಗಳ ಕೆಲಸಗಳ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ರೈತರನ್ನು ಒಗ್ಗೂಡಿಸಿ ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಬೇಕು. ಬೀಜದಿಂದ ಮಾರುಕಟ್ಟೆಯವರೆಗೂ ರೈತರೇ ತಮ್ಮ ಬೆಳೆಗಳಿಗೆ ದರ ನಿಗದಿಗೊಳಿಸಬೇಕು. ಉತ್ಪನ್ನಗಳನ್ನು ರೈತರೇ ಮಾರಾಟ ಮಾಡಿದಾಗ ಮಾತ್ರ ಹೆಚ್ಚು ಲಾಭ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಈ ಎಲ್ಲ ದೃಷ್ಟಿಯಿಂದ ನೋಡಿದಾಗ ಪಿಎಫ್ಒಗಳು ರೈತರ ಆದಾಯವನ್ನು ಹೆಚ್ಚಿಸುತ್ತವೆ. ಈ ದಿಕ್ಕಿನಲ್ಲಿ ರೈತ ಮೋರ್ಚಾ ಪದಾಧಿಕಾರಿಗಳು ಕೃಷಿಕರಿಗೆ ತಿಳಿವಳಿಕೆ ಮೂಡಿಸಬೇಕು ಎಂದು ಸಲಹೆ ನೀಡಿದರು.
ಪಕ್ಷದ ಮುಖಂಡರು ತಮ್ಮ ಮಂಡಲ ವ್ಯಾಪ್ತಿಯಲ್ಲಿ ಯಾವ ಬೆಳೆಯನ್ನು ರೈತರು ಹೆಚ್ಚು ಬೆಳೆಯುವರು, ಅದರ ಬೆಲೆ, ಅನಿಶ್ಚಿತತೆ ಇತ್ಯಾದಿ ಬಗ್ಗೆ ಗಮನವಹಿಸಬೇಕು ಎಂದರು.
ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಸಿ.ವಿ. ಲೋಕೇಶ್ ಗೌಡ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಿ.ವಿ. ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಹಾಗೂ ಜಿಲ್ಲೆಯ ಎಲ್ಲ ಮಂಡಲದ ರೈತ ಮೋರ್ಚಾ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.