ಶಿಡ್ಲಘಟ್ಟ: ತಾಲ್ಲೂಕಿನ ಚೀಮನಹಳ್ಳಿಯ ಅಪ್ಪು ಅಭಿಮಾನಿಗಳ ಬಳಗ ಮತ್ತು ಗ್ರಾಮಸ್ಥರಿಂದ ಭಾನುವಾರ 67ನೇ ಕರ್ನಾಟಕ ರಾಜ್ಯೋತ್ಸವಆಚರಿಸಲಾಯಿತು. ಅಲ್ಲದೆ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ನೆನಪಿನಾರ್ಥವಾಗಿ ಸ್ಮಾರಕ ಮತ್ತು ತಂಗುದಾಣ ಉದ್ಘಾಟಿಸಲಾಯಿತು.
ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ವೈದ್ಯ ಡಾ. ಸತ್ಯನಾರಾಯಣ ರಾವ್, ‘ಕನ್ನಡ ಕೇವಲ ಭಾಷೆ ಮಾತ್ರವಲ್ಲದೆ, ಅದು ನಮ್ಮ ಬದುಕೂ ಹೌದು.ಕನ್ನಡವನ್ನು ನಾವು ಬದುಕಾಗಿ ಬದಲಾಯಿಸಿಕೊಂಡಲ್ಲಿ ಉತ್ತಮ ಜೀವನ ರೂಪಿಸಿ ಕೊಳ್ಳಬಹುದು’ ಎಂದರು.
ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಪರಂಪರೆ, ಶ್ರೀಮಂತಿಕೆಯನ್ನು ಯಾರೂ ಮರೆಯಬಾರದು. ನಮ್ಮ ಕನ್ನಡದ ಕಣ್ಮಣಿ ಅಪ್ಪು ಅವರ ಅಕಾಲಿಕ ಮರಣದಿಂದ ನಮ್ಮ ರಾಜ್ಯವೇ ಕಣ್ಣೀರಲ್ಲಿ ಮುಳುಗಿದೆ. ಅಪ್ಪು ಅವರು ನಮ್ಮ ನಾಡಿನಲ್ಲಿ ಹುಟ್ಟಿ ಬರಲಿ. ಕರ್ನಾಟಕ ರತ್ನ ಪವರ್ಸ್ಟಾರ್ ಪುನೀತ್ ಅವರ ಗಂಧದಗುಡಿ ಎಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದೆ ಎಂದರು.
ಗ್ರಾಮದ ಸಿ.ಎಚ್. ಬಸವರಾಜ್, ಸಿ.ವಿ. ಮುನಿರಾಜ, ಸಿ.ಬಿ. ಕೊಂಡೇಗೌಡ, ಧನಂಜಯ್ ಸಿ, ಕೆ. ಮನೋಹರ್, ಸಿ.ಎನ್. ದೇವರಾಜ್, ಸಿ.ಎಂ. ಸುಧಾಕರ್, ಸಿ.ವಿ. ವಿನಯ್ ಕುಮಾರ್, ಮುನಿಕೃಷ್ಣ, ಶ್ರೀನಿವಾಸ್, ನಾರಾಯಣಸ್ವಾಮಿ ಹಾಗೂ ಗ್ರಾಮಸ್ಥರು ಇದ್ದರು.