ಚಿಕ್ಕಬಳ್ಳಾಪುರ: ‘ಎಷ್ಟೋ ದಲಿತರು ಸಸ್ಯಾಹಾರಿಗಳಾಗಿದ್ದಾರೆ. ಆದರೂ ಕಾಂಗ್ರೆಸ್ನವರು ದಲಿತರು, ಹಿಂದುಳಿದವರು ಗೋಮಾಂಸ ಸೇವಿಸುತ್ತಾರೆ ಎಂದು ಅಪಹಾಸ್ಯ ಮಾಡುವ ಮೂಲಕ ಅವಮಾನ ಮಾಡುತ್ತಿದ್ದಾರೆ’ ಎಂದು ಆರೋಗ್ಯ ಮತ್ತ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿರೋಧ ಪಕ್ಷಗಳು ದಲಿತರು, ಹಿಂದುಳಿದವರಿಗೆ ಗೋಮಾಂಸ ತಿನ್ನುವವರು ಎನ್ನುವ ಹಣೆಪಟ್ಟಿ ಕಟ್ಟುವುದು ಬೇಡ. ಈ ರೀತಿ ಮಾಡಿಯೇ ಹಿಂದೂಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ನಮ್ಮ ದೇಶದಲ್ಲಿ ನಾವೆಲ್ಲ ಗೋವುಗಳಿಗೆ ಕುಟುಂಬದ ಸದಸ್ಯರ ಸ್ಥಾನಮಾನ ನೀಡಿದ್ದೇವೆ. ಈ ಸಂಸ್ಕಾರ, ಪರಂಪರೆ ನಮ್ಮಲ್ಲಿ ಸಾವಿರಾರು ವರ್ಷಗಳಿಂದ ಇದೆ. ಹಾಗಾಗಿ ಬಿಜೆಪಿಯ ಆಶಯ ಮತ್ತು ಸಿದ್ಧಾಂತ ಗೋವಿನ ಪರವಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.