ಗುಡಿಬಂಡೆ: ‘ಸತತ ಬರದಿಂದ ಕೂಡಿದ ಗಡಿನಾಡಿನ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರಿಕ್ಷೆಯಲ್ಲಿ ಶೇ 97.97ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ರಾಜ್ಯದ 234 ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಫಲಿತಾಂಶವನ್ನು ಗುಡಿಬಂಡೆ ಪಡೆಯುವ ಮೂಲಕ ರಾಜ್ಯ ಮಟ್ಟದಲ್ಲಿ ಮೊದಲ ಸ್ಥಾನ ಗಳಿಸಿದೆ. ವಿದ್ಯಾರ್ಥಿಗಳು ಮಾಡಿರುವ ಸಾಧನೆ ರಾಜ್ಯಕ್ಕೆ ಮಾದರಿ’ ಎಂದು ಶಾಸಕ ವೈ.ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಲು ಶ್ರಮವಹಿಸಿದ ಗುಡಿಬಂಡೆ ತಾಲ್ಲೂಕಿನ ಶಿಕ್ಷಕ ವರ್ಗ ಹಾಗೂ ಆಡಳಿತ ವರ್ಗಕ್ಕೆ ಅಭಿನಂದಿಸಿ ಮಾತನಾಡಿದರು.
ಗಡಿ ಪ್ರದೇಶದ ವಿದ್ಯಾರ್ಥಿಗಳೂ ಉನ್ನತ ಸಾಧನೆ ಮಾಡಬಲ್ಲರು ಎಂಬುದನ್ನುಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸಾಬೀತು ಮಾಡಿದ್ದಾರೆ. ವಿದ್ಯಾರ್ಥಿಗಳು ಈ ಸಾಧನೆಗೆ ಪೂರಕವಾಗಿ ಕೆಲಸ ಮಾಡಿದ ಎಲ್ಲ ಅಧಿಕಾರಿಗಳೂ ಇಂದು ಅಭಿನಂದನೆಗೆ ಅರ್ಹರು ಎಂದು ಹೇಳಿದರು.
ನಂತರ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಇಂದು ಇಡಿ ರಾಜ್ಯಕ್ಕೆ ಗುಡಿಬಂಡೆಯ ವಿದ್ಯಾರ್ಥಿಗಳ ಪರಿಶ್ರಮ ತಿಳಿದಿದೆ. ಈ ಸಾಧನೆಗೆ ಮುಖ್ಯವಾಗಿ ಶಿಕ್ಷಣ ಇಲಾಖೆ, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಆಡಳಿತ ಸೇರಿದಂತೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ್ದಾರೆ ಎಂದರು.
ತಹಶೀಲ್ದಾರ್ ಡಿ. ಹನುಮಂತ ರಾಯಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವರಲಕ್ಷ್ಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಲಿಂಗಪ್ಪ, ಗ್ರೇಡ್-2 ತಹಶೀಲ್ದಾರ್ ಸಿಗ್ಬತ್ತುಲ್ಲಾ, ಬಿಇಒ ವೆಂಕಟೇಶಪ್ಪ, ಮುಖಂಡರಾದ ಬೈರಾರೆಡ್ಡಿ, ಆದಿನಾರಾಯಣಪ್ಪ, ರಾಜಗೋಪಾಲ, ಪದ್ಮಾವತಮ್ಮ ಇದ್ದರು.