ಚಿಕ್ಕಬಳ್ಳಾಪುರ: ಭಾರತೀಯ ವ್ಯಾಯಾಮಗಳಲ್ಲಿ ಸೂರ್ಯ ನಮಸ್ಕಾರ ಮಹತ್ವದ ಸ್ಥಾನ ಪಡೆದಿದೆ. ಸೂರ್ಯ ನಮಸ್ಕಾರಕ್ಕೆ ವೇದ ಕಾಲದಿಂದಲೂ ಮಹತ್ವವಿದೆ ಎಂದು ಪತಂಜಲಿ ಯೋಗ ಸಮಿತಿ ಜಿಲ್ಲಾ ಅಧ್ಯಕ್ಷ ಸಾಫ್ಟ್ವೇಕ್ ಗೋವಿಂದ ಹೇಳಿದರು.
ಪತಂಜಲಿ ಯೋಗ ಸಮಿತಿ ನಗರ ಹೊರವಲಯದ ಚಿತ್ರಾವತಿಯ ಕಲ್ಯಾಣಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಿತಿ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ವೀಣಾ ಲೋಕನಾಥ್ ಮಾತನಾಡಿ, ಸೂರ್ಯ ನಮಸ್ಕಾರದಿಂದ ಆರೋಗ್ಯ ವೃದ್ಧಿ ಆಗುತ್ತದೆ. ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಸೂರ್ಯ ನಮಸ್ಕಾರಗಳು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದರು.
ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಮುಖ ಲಕ್ಷ್ಮಣಮೂರ್ತಿ ಮಾತನಾಡಿ, ಸೂರ್ಯ ನಮಸ್ಕಾರ ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮದ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ನೆರವಾಗುತ್ತದೆ ಎಂದು ಹೇಳಿದರು.
ಪಿ.ವಿ. ರಾಮಚಂದ್ರರೆಡ್ಡಿ ಮಾತನಾಡಿದರು.ಪತಂಜಲಿ ಯೋಗ ಸಮಿತಿಯ ಡಾ.ಲೋಕನಾಥ್, ಕೆ ಎಂ. ಮುನಿಕೃಷ್ಣ ಮೊಬೈಲ್ ಬಾಬು, ಸುಬ್ರಹ್ಮಣ್ಯಾಚಾರಿ, ಟಿ. ಮೂರ್ತಿ, ಮಹೇಶ್ ಬಾಬು, ಹನುಮಂತು ಭಾಗವಹಿಸಿದ್ದರು.