ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸೋಮವಾರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಸುಸೂತ್ರವಾಗಿ ನಡೆದವು. ಒಟ್ಟು 11 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. ಪರೀಕ್ಷೆಗಾಗಿ 8 ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ.
ಸೋಮವಾರ ಬೆಳಿಗ್ಗೆ 10.15 ರಿಂದ 1.30ರ ವರೆಗೆ ಉರ್ದು ಮತ್ತು ಸಂಸ್ಕೃತ, ಮಧ್ಯಾಹ್ನ 2.15 ರಿಂದ 5.30ರ ವರೆಗೆ ಪರೀಕ್ಷೆಗಳು ನಡೆದವು. ಜಿಲ್ಲೆಯಲ್ಲಿ ಉರ್ದು ಪರೀಕ್ಷೆಗೆ 8 ಅಭ್ಯರ್ಥಿಗಳು, ಉರ್ದು ಪರೀಕ್ಷೆಗೆ ಒಬ್ಬ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಪರೀಕ್ಷೆಗೆ ಇಬ್ಬರು ಹೆಸರು ನೋಂದಾಯಿಸಿಕೊಂಡಿದ್ದರು. ಮೊದಲ ದಿನದ ಪರೀಕ್ಷೆಗೆ ಎಲ್ಲರೂ ಪರೀಕ್ಷೆಗೆ ಹಾಜರಾದರು.
ಜಿಲ್ಲೆಯಲ್ಲಿ ಪೂರಕ ಪರೀಕ್ಷೆಗೆ 3,613 ಪರೀಕ್ಷಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಚಿಕ್ಕಬಳ್ಳಾಪುರದಲ್ಲಿ 738, ಬಾಗೇಪಲ್ಲಿ 520, ಗೌರಿಬಿದನೂರು 974, ಶಿಡ್ಲಘಟ್ಟ 377, ಚಿಂತಾಮಣಿ 926 ಮತ್ತು ಗುಡಿಬಂಡೆ ತಾಲ್ಲೂಕಿನಲ್ಲಿ 78 ಮಂದಿ ಪರೀಕ್ಷೆಗೆ ಹಾಜರಾಗಲಿದ್ದಾರೆ.
ಪರೀಕ್ಷೆಗಾಗಿ ಚಿಕ್ಕಬಳ್ಳಾಪುರದಲ್ಲಿ 2, ಬಾಗೇಪಲ್ಲಿ 1, ಚಿಂತಾಮಣಿ 2, ಶಿಡ್ಲಘಟ್ಟ 1, ಗೌರಿಬಿದನೂರು 1 ಮತ್ತು ಗುಡಿಬಂಡೆಯಲ್ಲಿ ಒಂದು ಕೇಂದ್ರ ತೆರೆಯಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಕೋವಿಡ್ ಸೋಂಕಿತರಿಗಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೊಠಡಿಗಳನ್ನು ವೈರಸ್ ನಾಶಕ ದ್ರಾವಣದಿಂದ ಶುಚಿಗೊಳಿಸಲಾಗಿದೆ.