ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಸಾಗದೆ ನನೆಗುದಿಗೆ ಬಿದ್ದ ಬಾಲ ಭವನ

Last Updated 7 ನವೆಂಬರ್ 2020, 15:22 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ‌ದಶಕ ಉರುಳಿದರೂ ಈವರೆಗೆ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಬಾಲ ಭವನದ ಕನಸು ಈಡೇರಿಲ್ಲ. ಪರಿಣಾಮ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬಾಲ ವೇದಿಕೆಯನ್ನು ಒದಗಿಸುವಂತಹ ಮಹತ್ವದ ಯೋಜನೆಯೊಂದು ಅನೇಕ ವರ್ಷಗಳಿಂದ ನನಸಾಗದೆ ನನೆಗುದಿಗೆ ಬಿದ್ದಿದೆ.

ಅತ್ಯಂತ ಕಡಿಮೆ ಶುಲ್ಕದಲ್ಲಿ ಜನಸಾಮಾನ್ಯರ ಮಕ್ಕಳ ವ್ಯಕ್ತಿತ್ವ ವಿಕಸನ ವೃದ್ಧಿಗೆ ಅಗತ್ಯವಾದ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ಕ್ರೀಡೆಯಂತ ಪಠ್ಯೇತರ ಚಟುಟಿಕೆಗಳ ತರಬೇತಿಗಳನ್ನು ನೀಡುವ ಮೂಲಕ, ಮಕ್ಕಳು ವೈಯಕ್ತಿಕ ಮತ್ತು ಮಾನಸಿಕವಾಗಿ ವಿಕಾಸ ಹೊಂದುವಂತೆ ನೋಡಿಕೊಳ್ಳುವುದು ಬಾಲ ಭವನ ಯೋಜನೆಯ ಮುಖ್ಯ ಧ್ಯೇಯ.

ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ಮಹತ್ವದ ಯೋಜನೆಯೊಂದು ದಶಕ ಕಳೆದರೂ ಅನುಷ್ಠಾನಕ್ಕೆ ಬಾರದಿರುವುದು ಶೋಚನೀಯ ಸಂಗತಿ ಎನ್ನುತ್ತಾರೆ ನಗರದ ಪ್ರಜ್ಞಾವಂತ ನಾಗರಿಕರು.

ನಗರದ ಹೊರವಲಯದ ಗೌರಿಬಿದನೂರು ರಸ್ತೆಯಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನದ (ರಂಗಸ್ಥಳ) ಬಳಿಯ ಸರ್ವೆ ನಂ 96ರಲ್ಲಿ 7 ಎಕರೆ ಜಮೀನನ್ನು ಜಿಲ್ಲಾ ಬಾಲ ಭವನ ನಿರ್ಮಿಸಲು 2015ರ ಜುಲೈ 17ರಂದು ಜಿಲ್ಲಾಧಿಕಾರಿ ಮಂಜೂರು ಮಾಡಿದ್ದಾರೆ. ಭೂಮಿ ಮಂಜೂರಾಗಿ ಮೂರು ವರ್ಷಗಳು ಸಮೀಪಿಸಿದರೂ ಭವನ ತಲೆ ಎತ್ತಿಲ್ಲ.

ಬಳಿಕ ಬಾಲ ಭವನ ಸೊಸೈಟಿಯು ಕಟ್ಟಡ, ಮಕ್ಕಳ ಹುಟ್ಟುಹಬ್ಬದ ಹಾಲ್, ಶೌಚಾಲಯ, ಆಟೋಪಕರಣ, ಟೆಲಿಸ್ಕೋಪ್, ಅಕ್ವೇರಿಯಂ, ಆಟದ ಮೈದಾನ ನಿರ್ಮಿಸಲು ₹60 ಲಕ್ಷ ಅನುದಾನ ಸಹ ಮಂಜೂರು ಮಾಡಿತ್ತು. ಆದರೆ 2017 ರಲ್ಲಿ ಉದ್ದೇಶಿತ ಜಾಗದ ಸಮೀಕ್ಷೆ ನಡೆಸಿದ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಅಧಿಕಾರಿಗಳು ಬಾಲಭವನಕ್ಕೆ ಮಂಜೂರಾದ ಜಾಗ ಸೂಕ್ತವಾಗಿಲ್ಲ ಎಂದು ವರದಿ ನೀಡಿದ್ದರು.

ಹೀಗಾಗಿ, ಬಾಲ ಭವನ ಸೊಸೈಟಿಯು ಬಾಲ ಭವನ ನಿರ್ಮಾಣಕ್ಕಾಗಿ ನೀಡಿದ್ದ ₹60 ಲಕ್ಷ ಅನುದಾನವನ್ನು 2018ರ ಆಗಸ್ಟ್‌ನಲ್ಲಿ ಹಿಂಪಡೆದು, ಪರ್ಯಾಯ ಜಾಗ ಹುಡುಕಿ, ಯೋಜನೆ ಸಿದ್ಧಪಡಿಸಿದ ಬಳಿಕ ಪುನಃ ಅನುದಾನ ನೀಡುವುದಾಗಿ ತಿಳಿಸಿತ್ತು. ಅಂದಿನಿಂದ ಈವರೆಗೆ ಬಾಲಭವನಕ್ಕೆ ಪರ್ಯಾಯ ಜಾಗ ಹುಡುಕುವ ಕೆಲಸ ನಡೆದಿಲ್ಲ.

ರಂಗಸ್ಥಳದ ಬಳಿ ನೀಡಿದ ಜಾಗ ಸರಿ ಇಲ್ಲದ ಕಾರಣಕ್ಕೆ ಅಮಾನಿ ಗೋಪಾಲಕೃಷ್ಣ ಕೆರೆ ಅಂಗಳದಲ್ಲಿರುವ ತೋಟಗಾರಿಕೆ ಇಲಾಖೆಗೆ ಸೇರಿದ ಜಮೀನಿನಲ್ಲಿ ಬಾಲಭವನಕ್ಕೆ ಸಹ ಜಾಗ ನೀಡುವುದಾಗಿ ಜಿಲ್ಲಾಧಿಕಾರಿ ಅವರು ಹೇಳಿದ್ದಾರೆ. ಜಾಗ ಮಂಜೂರಾದ ತಕ್ಷಣವೇ ಬಾಲ ಭವನ ನಿರ್ಮಿಸುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು ಅದು ಕೂಡ ಈವರೆಗೆ ಕೈಗೂಡಿಲ್ಲ.

ಪರಿಣಾಮ, ಪ್ರತಿ ಬೇಸಿಗೆ ಸಂದರ್ಭದಲ್ಲಿ ಪೋಷಕರು ಮಕ್ಕಳಿಗೆ ಬೇಸಿಗೆ ರಜೆ ಕಳೆಯಲು ಸೂಕ್ತ ತಾಣವಿಲ್ಲದ್ದು ನೆನೆದು ಹಿಡಿಶಾಪ ಹಾಕುವಂತಾಗಿದೆ. ಆದರೂ ಅಧಿಕಾರಿಗಳು, ಜಿಲ್ಲಾಡಳಿತ ಈ ವಿಚಾರ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಜ್ಞಾವಂತರು ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT