ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಮಳೆಗಾಲದ ಸಿದ್ಧತೆ ಮರೆತೆಬಿಟ್ಟ ನಗರಸಭೆ

ನಗರದಲ್ಲಿ ದಿನೇ ದಿನೇ ಹೂಳು, ಕಸಕಡ್ಡಿಗಳಿಂದ ತುಂಬಿಕೊಳ್ಳುತ್ತಿರುವ ಚರಂಡಿ, ತಗ್ಗು ಪ್ರದೇಶದ ಜನರಿಗೆ ತಪ್ಪುತ್ತಿಲ್ಲ ಮನೆಗೆ ನೀರು ನುಗ್ಗುವ ಗೋಳು
Last Updated 14 ಜೂನ್ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮಳೆಗಾಲಕ್ಕೂ ಮುನ್ನ ನಗರದ ಚರಂಡಿ, ರಾಜ ಕಾಲುವೆಗಳನ್ನು ಸ್ವಚ್ಛಗೊಳಿಸಿ, ಸುಸಜ್ಜಿತವಾಗಿಡುವ ಕೆಲಸವನ್ನು ನಗರಸಭೆ ಮರೆತೇ ಬಿಟ್ಟಿದೆ ಎನ್ನುವ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಇದರ ಪರಿಣಾಮ ಎನ್ನುವಂತೆ, ವರ್ಷದಿಂದ ವರ್ಷಕ್ಕೆ ನಗರದಲ್ಲಿ ಕಾಲುವೆಗಳು ಚರಂಡಿ ಗಾತ್ರಕ್ಕೆ ಕುಗ್ಗಿ, ಚರಂಡಿಗಳು ಹೂಳಿನಿಂದ ಮುಚ್ಚಿವೆ. ಜೋರಾಗಿ ಮಳೆ ಸುರಿದಾಗ ಅನೇಕ ಕಡೆಗಳಲ್ಲಿ ಪ್ರವಾಹ ಸ್ಥಿತಿ ತಲೆದೋರಿ, ತಗ್ಗು ಪ್ರದೇಶಗಳಲ್ಲಿ ನೀರು ಮನೆಗಳಿಗೆ ನುಗುತ್ತಿದೆ. ನಾಗರಿಕರನ್ನು ಹೈರಾಣು ಮಾಡುತ್ತಿದೆ.

ನಗರಸಭೆಯ ವ್ಯಾಪ್ತಿಯ 31 ವಾರ್ಡ್‌ಗಳ ಪೈಕಿ ಯಾವುದೇ ವಾರ್ಡ್‌ಗೆ ಹೋದರೂ ಸ್ವಚ್ಛ ಚರಂಡಿ ಕಾಣುವುದು ಅಪರೂಪ. ಅಚ್ಚರಿ ಅಂದರೆ ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 12 ವರ್ಷಗಳು ಕಳೆದರೂ ಇನ್ನು ಕೆಲವೆಡೆ ಚರಂಡಿಗಳೇ ನಿರ್ಮಾಣವಾಗಿಲ್ಲ. ಚರಂಡಿ ಇರುವೆಡೆ ಸ್ವಚ್ಛತೆ ಮರೀಚಿಕೆಯಾಗಿದೆ.

ನಗರದ ಬಹುಪಾಲು ಚರಂಡಿಗಳು ಕೊಳಚೆ ನೀರಿನಿಂದ ಮಡುಗಟ್ಟಿತಿವೆ. ಸಂಜೆ ಸೊಳ್ಳೆಗಳ ಕಾಟಕ್ಕೆ ನಾಗರಿಕರು ಸಂಜೆಯಾದರೆ ಮನೆಯ ಬಾಗಿಲು, ಕಿಟಕಿಗಳನ್ನು ತೆರೆಯಲು ಹಿಂದೇಟು ಹಾಕುವ ಸ್ಥಿತಿ ಇದೆ.

ಒಂದೆಡೆ ಭೂಗಳ್ಳರ ಕಾಕದೃಷ್ಟಿ, ಇನ್ನೊಂದೆಡೆ ನಗರಸಭೆಯ ನಿರ್ಲಕ್ಷ್ಯದಿಂದ ಚರಂಡಿಗಳು ಬಾಯಿ ಹೊಲಿದುಕೊಂಡು, ಸತ್ತು ಮಲಗಿದಂತಿವೆ. ಒತ್ತುವರಿ ಮೇಲೆ ಕಣ್ಣಿಡಬೇಕಾದ ಕಂದಾಯ ಇಲಾಖೆ, ಕಾಲ ಕಾಲಕ್ಕೆ ಹೂಳೆತ್ತಿ ಮಳೆ ನೀರಿಗೆ ಸರಾಗ ಹರಿವು ಕಲ್ಪಿಸಿಕೊಡಬೇಕಾದ ನಗರಸಭೆ ಕರ್ತವ್ಯ ಮರೆತಿವೆ ಎನ್ನುವುದು ಸಾರ್ವಜನಿಕರ ಆಕ್ರೋಶ ಭರಿತ ಆರೋಪ.

ನಗರಸಭೆಯ ವ್ಯಾಪ್ತಿಯಲ್ಲಿರುವ 2ನೇ ವಾರ್ಡ್‌ (ವಾಪಸಂದ್ರ), 3ನೇ ವಾರ್ಡ್‌ (ದರ್ಗಾ ಮೊಹಲ್ಲಾ), 4ನೇ ವಾರ್ಡ್ (ಪ್ರಶಾಂತ್‌ ನಗರ, ಭಗತ್‌ ಸಿಂಗ್ ನಗರ), 5ನೇ ವಾರ್ಡ್‌ (ದಿನ್ನೆ ಹೊಸಹಳ್ಳಿ ರಸ್ತೆ), 7ನೇ ವಾರ್ಡ್ (ಗಂಗನಮಿದ್ದೆ), 8ನೇ ವಾರ್ಡ್‌ (ಜೈಭೀಮ್ ನಗರ, ಜಿಲ್ಲಾ ಆಸ್ಪತ್ರೆ ಮುಂಭಾಗದ ಪ್ರದೇಶ), 21ನೇ ವಾರ್ಡ್‌ (ನಕ್ಕಲಕುಂಟೆ)... ಹೀಗೆ ಅನೇಕ ವಾರ್ಡ್‌ಗಳಲ್ಲಿ ಜೋರು ಮಳೆ ಸುರಿದ ಸಂದರ್ಭದಲ್ಲಿ ಒಂದು ಸುತ್ತು ಹಾಕಿದರೆ ಜನ ನಲಗುವ ಸಮಸ್ಯೆಗಳು ದಂಡಿಯಾಗಿ ಗೋಚರಿಸುತ್ತವೆ.

ಇದೀಗ ಮುಂಗಾರು ಆರಂಭಗೊಂಡಿದೆ. ಹೀಗಾಗಿ ಈ ಎಲ್ಲ ವಾರ್ಡ್‌ಗಳ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ. ಅಧಿಕಾರಿಗಳು ಮಾತ್ರ ನಿರಾಂತಕವಾಗಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದರೆ ಒಂದು ಅಂದಾಜಿನ ಪ್ರಕಾರ ನಗರದಲ್ಲಿ ಆರು ವಾರ್ಡ್‌ಗಳ ಪೈಕಿ ಸುಮಾರು 240 ಮನೆಗಳಿಗೆ ನೀರು ನುಗ್ಗುತ್ತದೆ.

ಕೆಲ ಪ್ರದೇಶಗಳಲ್ಲಿ ಜನರು ಜೋರಾಗಿ ಮಳೆ ಸುರಿದರೆ ಮನೆ ತಲುಪಲು ಬಗೆ ಬಗೆಯಲ್ಲಿ ಸರ್ಕಸ್‌ ಮಾಡಬೇಕು. ಹಲವೆಡೆ ಮನೆಗೆ ನುಗ್ಗಿದ ನೀರು ಹೊರ ಹಾಕಿ, ಹಾಕಿ ಸುಸ್ತಾದವರ ಮುಖದಲ್ಲಿ ಅಳುವುದೇ ಬಾಕಿ.

ನಗರದ ರೇಷ್ಮೆಗೂಡು ಮಾರುಕಟ್ಟೆ ಬಳಿಯ ಕೊಳೆಗೇರಿಯಲ್ಲಿ ಕೆಲ ವರ್ಷಗಳ ಹಿಂದೆ ಮಳೆಗಾಲದಲ್ಲಿ ಉಕ್ಕಿ ಬರುವ ಮಳೆ ನೀರು ಮನೆಯಲ್ಲಿದ್ದ ವಸ್ತುಗಳೆಲ್ಲ ಕೊಚ್ಚಿ, ಕೆಲ ಹೊತ್ತಿನಲ್ಲೇ ಜನರನ್ನು ಅಕ್ಷರಶಃ ನಿರಾಶ್ರಿತರನ್ನಾಗಿ ಮಾಡಿತ್ತು. ಆಸರೆಗಾಗಿ ಕತ್ತಲಲ್ಲಿ ಮೊರೆ ಇಡುತ್ತಿದ್ದವರಿಗೆ ನಗರಸಭೆ ಅಧಿಕಾರಿಗಳು ಮಾರುಕಟ್ಟೆಯ ಕಟ್ಟಡದಲ್ಲಿ ಆಶ್ರಯ ಒದಗಿಸಿ, ಆಹಾರ, ಹೊದಿಕೆ ಏರ್ಪಾಟು ಮಾಡುವಂತಾಗಿತ್ತು.

ಗಮನಿಸಬೇಕಾದ ಅಂಶಗಳೆಂದರೆ ಮಳೆಯಿಂದ ತತ್ತರಿಸುವ ಪ್ರದೇಶಗಳಲ್ಲಿ ಕೆಳ ವರ್ಗದವರು, ದಲಿತರು, ಅಲ್ಪಸಂಖ್ಯಾತರು, ಬಡವರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ತಲೆ ಮೇಲಿನ ಸೂರಿಗೆ ಪರದಾಡುವ ಜನರು ಜೋರು ಮಳೆಯಿಂದ ಒತ್ತರಿಸಿ ಬರುವ ನೀರಿನಿಂದಾಗಿ ಮತ್ತಷ್ಟು ಕಂಗಾಲಾಗಿ ಹೋಗಿದ್ದಾರೆ. ಕಾಳಜಿ ತೋರಬೇಕಾದವರು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಜನಸಾಮಾನ್ಯರಲ್ಲಿ ಬೇಸರ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT