ಚಿಂತಾಮಣಿ: ತಾಲ್ಲೂಕಿನ ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುನ್ನಹಳ್ಳಿಯಲ್ಲಿ ಕೃಷಿ ಇಲಾಖೆ ವತಿಯಿಂದ ಕುರುವಲುಚಿಂತಾಮಣಿ ಉಪ ಜಲಾನಯನ ಅಭಿವೃದ್ಧಿ ಮೂಲಕ ಬರಗಾಲ ತಡೆಯುವಿಕೆ ಬಗ್ಗೆ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು
ಜಲಾನಯನ ಅಭಿವೃದ್ಧಿ ಇಲಾಖೆಯ ತಂಡದ ನಾಯಕ ಪಾಪಿರೆಡ್ಡಿ ಅವರು ಜಾಥಾಗೆ ಚಾಲನೆ ನೀಡಿ ಮಾತನಾಡಿ, ಹಳ್ಳಿಯಲ್ಲಿರುವ ಪ್ರತಿ ಮನೆಯವರು ನಿಗದಿತ ನಮೂನೆಯಲ್ಲಿ ತಮ್ಮ ಸಂಪೂರ್ಣ ಕುಟುಂಬಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ದಾಖಲಿಸಬೇಕು. ರೈತರು ತಮ್ಮ ಜಮೀನುಗಳಲ್ಲಿ ಯಾವ ಯಾವ ಗಿಡ ಮರಗಳು, ಬೆಳೆ ಬೆಳೆಯಲಾಗಿದೆ ಎಂಬ ಮಾಹಿತಿಯನ್ನು ನೀಡಬೇಕು’ ಎಂದರು.
‘ಜಮೀನು ಇಲ್ಲದೆ ಕುಟುಂಬದ ಸ್ವ ಸಹಾಯ ಸಂಘಗಳು ಕೂಡ ನಮೂನೆಯಲ್ಲಿ ತಮ್ಮ ದಾಖಲೆಗಳನ್ನು ನಮೂದಿಸಬೇಕು. ಸ್ವಸಹಾಯ ಸಂಘಗಳ ಸದಸ್ಯರಿಗೆ ಕೌಶಲ ತರಬೇತಿ ನೀಡಿ ಬ್ಯಾಂಕಿನಿಂದ ಸಾಲವನ್ನು ಕೊಡಿಸಿ ಆರ್ಥಿಕವಾಗಿ ಬೆಳೆಸುವ ಯೋಜನೆ ಈ ಕಾರ್ಯಕ್ರಮದಲ್ಲಿದೆ’ ಎಂದರು.
‘ಈ ಕಾರ್ಯಕ್ರಮ 5 ವರ್ಷ ನಡೆಯುತ್ತಿದ್ದು, ಪ್ರತಿಯೊಂದು ಕುಟುಂಬ ದವರು ಇಂದಿನ ಪರಿಸ್ಥಿತಿ ಮುಂದೆ 5 ವರ್ಷದ ಪರಿಸ್ಥಿತಿಗೆ ಅನುಗುಣವಾಗಿ ಆರ್ಥಿಕವಾಗಿ ಬೆಳೆಯಲು ಬೇಕಾಗಿರುವ ಸೌಕರ್ಯ ಸೌಲಭ್ಯ ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ರೈತರು ತಮ್ಮ ಜಮೀನಿನಲ್ಲಿ ಕುಂಟೆ, ಬದುಗಳು, ಚೆಕ್ಡ್ಯಾಮ್, ಕೃಷಿ ಹೊಂಡ, ತೆರೆದ ಬಾವಿಗಳನ್ನು ಮಾಡಿಕೊಳ್ಳಬೇಕು. ಅಂತರ್ಜಲವನ್ನು ಹೆಚ್ಚಿಸುವುದು, ನೀರಿನ ಸಂರಕ್ಷಣೆ, ದುರ್ಬಲ ಹಾಗೂ ಕಡು ಬಡವರನ್ನು ಆರ್ಥಿಕವಾಗಿ ಬಲಪಡಿಸುವ ಯೋಜನೆ ಇದಾಗಿದೆ’ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಪಿ.ಶ್ರೀನಿವಾಸ್, ಮಂಜುಳಾ ಮುನಿರಾಜು ಮುಖಂಡರಾದ ಮುನಿರೆಡ್ಡಿ, ಮುನಿಯಪ್ಪ, ಎನ್,ಎಂ.ನಾರಾಯಣಸ್ವಾಮಿ, ರಾಧಾಕೃಷ್ಣ, ರಾಜಣ್ಣ, ಅಣ್ಣಯಪ್ಪ, ಜಿ.ವಿ.ನಾರಾಯಣಸ್ವಾಮಿ, ಕೃಷ್ಣಪ್ಪ, ಜಲಾನಯನದಮುನಿಆಂಜಪ್ಪ, ಗೋಪಾಲಕೃಷ್ಣ, ರೈತರು ಉಪಸ್ಥಿತರಿದ್ದರು.