ಚಿಕ್ಕಬಳ್ಳಾಪುರ: ‘ವಿದ್ಯಾರ್ಥಿ ಜೀವನ ಪ್ರತಿ ವ್ಯಕ್ತಿಯ ಬದುಕಿನಲ್ಲಿ ಸುಂದರವಾದ ಹಂತ. ಈ ಅವಧಿಯಲ್ಲಿ ಮಕ್ಕಳು ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗದೆ ಸಮಾಜದಲ್ಲಿ ಉತ್ತಮಪ್ರಜೆಯಾಗಿ ಬಾಳಬೇಕು. ಅದಕ್ಕೆ ಪೂರಕವಾಗಿ ಯುವಸ್ಪಂದನ ಕೇಂದ್ರ ಯುವಜನರಿಗೆ ದಾರಿದೀಪವಾಗಿದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಟಿ.ಜಯಲಕ್ಷ್ಮೀ ಹೇಳಿದರು.
ನಗರದ ಸರ್.ಎಂ.ವಿ.ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗರದ ಗುಡ್ ಶಫರ್ಡ್ ಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಯುವ ಜನರು ತಮ್ಮ ಭವಿಷ್ಯದ ಬಗ್ಗೆ ಆಲೋಚನೆ ಮಾಡಬೇಕು. ಪ್ರತಿಯೊಬ್ಬರಲ್ಲಿಯೂ ಸಾದಿಸುವ ಗುರಿ ಇರಬೇಕು. ಅದಕ್ಕೆ ಸಹಕಾರಿಯಾಗುವಂತೆ ಯುವಸ್ಪಂದನ ಕೇಂದ್ರದಿಂದ ಸಿಗುವ ಮಾರ್ಗದರ್ಶನ ಪಡೆದುಕೊಳ್ಳಬೇಕು. ಏನೇ ಸಮಸ್ಯೆ, ತೊಂದರೆ ಇದ್ದಲ್ಲಿ ಯುವಸ್ಪಂದನ ಉಚಿತವಾಗಿ ಮಾರ್ಗದರ್ಶನ ನೀಡುವ ಮೂಲಕ ಯುವಜನರಿಗೆ ನೆರವಾಗಲಿದೆ’ ಎಂದು ತಿಳಿಸಿದರು.
ಯುವ ಪರಿವರ್ತಕ ಎನ್.ಮುನಿನಾರಾಯಣಸ್ವಾಮಿ ಮಾತನಾಡಿ, 'ಯುವಜನರು ಮಾನಸಿಕವಾಗಿ ಒತ್ತಡಕ್ಕೆ ಸಿಲುಕುವುದರಿಂದ ತಮ್ಮ ಜೀವನದಲ್ಲಿ ಪರಿಪೂರ್ಣತೆಯನ್ನು ಹೊಂದಲು ಸಾಧ್ಯವಿಲ್ಲ. ಯುವಸ್ಪಂದನ ಕೇಂದ್ರದಲ್ಲಿ, ಸಂಬಂಧಗಳು, ಸುರಕ್ಷತೆ, ಶಿಕ್ಷಣ, ಆರೋಗ್ಯ ಮತ್ತು ಜೀವನಶೈಲಿ, ಭಾವನೆಗಳ ನಿರ್ವಹಣೆ ಕುರಿತ ವಿಷಯಗಳ ಬಗ್ಗೆ ಉಚಿತವಾಗಿ ಮಾರ್ಗದರ್ಶನ ಸಿಗುತ್ತದೆ. ಏನೇ ಕಷ್ಟ ಬಂದರೂ ಯುವಸ್ಪಂದನ ಕೇಂದ್ರಕ್ಕೆ ಭೇಟಿ ನೀಡಿ ಉಪಯೋಗ ಪಡೆಯಬಹುದು’ ಎಂದರು.
ಯುವ ಸಮಾಲೋಚಕಿ ಸೌಮ್ಯ, ಗುಡ್ ಶಫರ್ಡ್ ಶಾಲೆಯ ಮುಖ್ಯ ಶಿಕ್ಷಕ ಜೇಮ್ಸ್ ಕ್ರಿಸ್ಟೋಫರ್, ಅಧ್ಯಕ್ಷ ಮಾನಸ, ಶಿಕ್ಷಕರಾದ ವಿಜಯ, ರುಕ್ಮಿಣಿ, ಲಕ್ಷ್ಮೀ, ಎಲಿಜಾಬೆತ್, ಚಂದ್ರಕಲಾ, ಸುಮಿತ್ರಾ, ರವಿಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.