ಚಿಕ್ಕಮಗಳೂರು: ಹೊರ ರಾಜ್ಯಗಳಿಂದ ಇದೇ 5ರಿಂದ 10ರವರೆಗೆ ಕಾಫಿನಾಡಿಗೆ 119 ಮಂದಿ ಬಂದಿದ್ದಾರೆ. ಎಲ್ಲರನ್ನು ತಪಾಸಣೆ ಮಾಡಲಾಗಿದೆ.
ತಮಿಳುನಾಡು– 43, ಮಹಾರಾಷ್ಟ್ರ–30, ತೆಲಂಗಾಣ– 22, ಕೇರಳ–11, ರಾಜಸ್ತಾನ–5, ಆಂಧ್ರಪ್ರದೇಶ–4, ಗುಜರಾತ್– 3, ಪುದುಚೇರಿಯಿಂದ ಒಬ್ಬರು ಬಂದಿದ್ದಾರೆ. ತೇಗೂರಿನ ಮೊರಾರ್ಜಿ ವಸತಿಶಾಲೆಯಲ್ಲಿನ ತಪಾಸಣೆ ಘಟಕದಲ್ಲಿ ಇವರೆಲ್ಲರನ್ನು ತಪಾಸಣೆ ಮಾಡಲಾಗಿದೆ.
ಕಾಫಿನಾಡು ಈಗ ಹಸಿರು ವಲಯದಲ್ಲಿದೆ. ಮುಂದೆಯೂ ಇದೇ ರೀತಿ ಕಾಪಾಡಿಕೊಳ್ಳುವುದು ಜಿಲ್ಲಾಡಳಿತದ ಮುಂದಿರುವ ಮತ್ತು ಜಿಲ್ಲೆಯ ಜನರ ಮುಂದಿರುವ ಸವಾಲು.
‘ಹೊರ ಜಿಲ್ಲೆಗೆ (ಕೆಂಪು, ಕಿತ್ತಳೆ ವಲಯ) ಹೋಗಿ ವಾಪಾಸಾಗುವ ಜಿಲ್ಲೆಯ ಅಧಿಕಾರಿಗಳ ಮೇಲೂ ನಿಗಾ ಇಡಬೇಕು. ಅಲ್ಲದೇ ಹೊರ ಜಿಲ್ಲೆ, ರಾಜ್ಯಗಳಿಂದ ಬಂದವರ ಮನೆ ಮುಂದೆ ಸ್ಟಿಕರ್ ಅಂಟಿಸಿ, ವಿಶೇಷ ನಿಗಾ ಇಡಬೇಕು. ಜಿಲ್ಲೆಯನ್ನು ಹಸಿರು ವಲಯದಲ್ಲೇ ಕಾಪಾಡಿಕೊಳ್ಳಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು’ ಎಂಬುದು ಡಾ.ಗೀತಾವೆಂಕಟೇಶ್ ಒತ್ತಾಯ.
ಕೋವಿಡ್–19 ಪತ್ತೆ ಪರೀಕ್ಷಾ ಪ್ರಯೋಗಾಲಯವೂ ಇಲ್ಲಿಲ್ಲ. ಸಂಗ್ರಹಿಸಿದ ಮಾದರಿ ಮಾದರಿಗಳನ್ನು ಹಾಸನ ಮತ್ತು ಶಿವಮೊಗ್ಗ ಪರೀಕ್ಷೆಗೆ ರವಾನಿಸಬೇಕು. ಅತ್ಯಾಧುನಿಕ ವೈದ್ಯಕೀಯ ಸೌಕರ್ಯಗಳಾಗಲಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವ್ಯವಸ್ಥೆಯಾಗಲಿ ಇಲ್ಲ. ಜಿಲ್ಲೆ ಹಸಿರು ವಲಯದಲ್ಲಿದೆ. ಕೋವಿಡ್ ಇಲ್ಲಿಗೆ ಕಾಲಿಡದಂತೆ ಕಟ್ಟೆಚ್ಚರ ವಹಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಜೊತೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಹೊರ ಜಿಲ್ಲೆಗಳಿಂದ (ಕೆಂಪು, ಕಿತ್ತಳೆ) ವಾಮಮಾರ್ಗಗಳಲ್ಲಿ ನುಸುಳದಂತೆ ಹದ್ದಿನ ಕಣ್ಣು ಇಡಬೇಕು. ಈಗಾಗಲೇ ಯಾರಾದರೂ ಆ ರೀತಿ ಬಂದಿದ್ದರೆ ಅವರ ಮೇಲೆ ನಿಗಾ ವಹಿಸಬೇಕು. ಅಲ್ಲದೇ ಜಿಲ್ಲೆಯಲ್ಲಿ ಮಾಸ್ಕ್ ಧಾರಣೆ ಮತ್ತು ಅಂತರ ಕಾಪಾಡುವ ನಿಟ್ಟಿನಲ್ಲಿಯೂ ಬಿಗಿಗೊಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.