ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಸ ಕ್ರೀಡೆ ಇಂದಿನಿಂದ ಶುರು

‌ಚಿಕ್ಕಮಗಳೂರು ಹಬ್ಬ ಅಂಗವಾಗಿ ಕ್ರೀಡೋತ್ಸವ
Last Updated 24 ಫೆಬ್ರುವರಿ 2020, 13:58 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದಲ್ಲಿ ಇದೇ 28ರಿಂದ ಮಾರ್ಚ್‌ 1ರವರೆಗೆ ಆಯೋಜಿಸಿರುವ ಚಿಕ್ಕಮಗಳೂರು ಹಬ್ಬ (ಜಿಲ್ಲಾ ಉತ್ಸವ) ಅಂಗವಾಗಿ ನಡೆದೆ ಉತ್ಸವಥಾನ್‌ ಯಶಸ್ವಿಯಾಗಿದೆ. 25ರಿಂದ ಸಾಹಸ ಕ್ರೀಡೆಗಳು ಶುರುವಾಗಲಿವೆ.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಉತ್ಸವ ಕಾಯಕ್ರಮಗಳ ವಿವರ ನೀಡಿದರು. ಉತ್ಸವಕ್ಕೆ ಒಟ್ಟಾರೆ ₹ 2.5 ಕೋಟಿ ವೆಚ್ಚವಾಗುವ ಅಂದಾಜಿದೆ ಎಂದು ತಿಳಿಸಿದರು.

ಯುವಜನ ಸಬಲೀಕರಣ– ಕ್ರೀಡಾ ಇಲಾಖೆ ಮತ್ತು ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿ ಸಹಯೋಗದಲ್ಲಿ ಇದೇ 25ರಿಂದ ಮಾರ್ಚ್‌1ರವರೆಗೆ ಜಲ, ವಾಯು, ಭೂಸಾಹಸ ಕ್ರೀಡೆಗಳು ನಡೆಯಲಿವೆ. ಜಲಸಾಹಸ ಕ್ರೀಡೆಗಳು ನಲ್ಲೂರು ಕೆರೆಯಲ್ಲಿ ಬೆಳಿಗ್ಗೆ 9ರಿಂದ ಸಂಜೆ 5.30ರವರೆಗೆ ನಡೆಯಲಿವೆ.

ಈ ವಿಭಾಗದಲ್ಲಿ ಜೆಟ್‌ ಸಕ್ಇ,ಸ್ಪೀಡ್‌ ಬೋಟ್‌, ಬನನಾ ರೇಡ್‌, ಬಂಪಿ ರೇಡ್‌, ಕಯಾಕ್‌, ಸ್ಟಿಲ್‌ ವಾಟರ್‌ ರ್ಯಾಫ್ಟಿಂಗ್‌, ವಾಟರ್‌ ರೊಲರ್‌ ಕ್ರೀಡೆಗಳನ್ನು ಏರ್ಪಡಿಸಲಾಗಿದೆ. ಕಯಾಕ್‌, ಸ್ಟಿಲ್‌ ವಾಟರ್‌ ರ್ಯಾಫ್ಟಿಂಗ್‌, ವಾಟರ್‌ ರೊಲರ್‌ ಕ್ರೀಡೆಗಳಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಪಾಲ್ಗೊಳ್ಳಬಹುದು. ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಸ್ಕೂಬಾ ಡೈವಿಂಗ್‌, ಜಿಪ್‌ ಲೈನ್‌, ಸ್ಲ್ಯಾಕ್‌ ಲೈನ್‌, ಜುಮರಿಂಗ್‌, ಬರ್ಮಾ ಬಿಡ್ಜ್‌ನಂಥ ಸಾಹಸ ಕ್ರೀಡೆಗಳು ನಡೆಯಲಿವೆ. ಬೆಳಿಗ್ಗೆ 9ರಿಂದ ಸಂಜೆ 6.30ರವ‌ರೆಗೆ ನಡೆಯುತ್ತವೆ. ಪ್ರವೇಶ ಉಚಿತ, ಸ್ಕೂಬಾ ಡೈವಿಂಗ್‌ಗೆ ಸರ್ಕಾರಿ ಶಾಲೆ ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಸುಭಾಷ್‌ ಚಂದ್ರಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿ ಮೊಬೈಲ್‌ ವಾಲ್‌ ಕ್ಲೈಂಬಿಂಗ್‌ ಸಾಹಸ ಪ್ರದರ್ಶನ ಆಯೋಜಿಸಲಾಗಿದೆ. ಬೆಳಿಗ್ಗೆ 9ರಿಂದ ಸಂಜೆ 6.30ರವರೆಗೆ ನಡೆಯಲಿದ್ದು, ಯಾವುದೇ ಶುಲ್ಕ ಇಲ್ಲ.

ಪ್ಯಾರಾ ಗ್ಲೈಡಿಂಗ್‌ ಸ್ಪರ್ಧೆ

ಚಿಕ್ಕಮಗಳೂರು ಅಡ್ವೆಂಚರ್ಸ್‌ ಸ್ಪೋರ್ಟ್ಸ್‌ ಕ್ಲಬ್‌ ವತಿಯಿಂದ ಪ್ಯಾರಾ ಗ್ಲೈಡಿಂಗ್‌ ವಾಯು ಸಾಹಸ ಕ್ರೀಡೆ ಇದೇ 28ರಿಂದ 1ರವರೆಗೆ ಜರುಗಲಿದೆ. ಎಐಟಿ ಕಾಲೇಜಿನ ಆಟದ ಮೈದಾನದಲ್ಲಿ ಬೆಳಿಗ್ಗೆ 6.30ರಿಂದ ಮಧ್ಯಾಹ್ನ 12 ಮತ್ತು ಸಂಜೆ 4ರಿಂದ 6 ಗಂಟೆವರೆಗೆ ನಡೆಯಲಿದೆ.

ವಿವಿಧ ಸ್ಪರ್ಧೆ

ಕುವೆಂಪು ಕಲಾಮಂದಿರದಲ್ಲಿ ಇದೇ 26 ರಿಂದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಚರ್ಚಾ ಸ್ಪರ್ಧೆಗಳು ನಡೆಯಲಿವೆ.

ಚಿತ್ರಕಲಾ ಶಿಬಿರ

ನಗರದ ಶಾಂತಿನಿಕೇತನ ಚಿತ್ರಕಲಾ ವಿದ್ಯಾಲಯದಲ್ಲಿ ಇದೇ 27ರವರೆಗೆ ರಾಷ್ಟ್ರಮಟ್ಟದ ಚಿತ್ರಕಲಾ ಶಿಬಿರ ಏರ್ಪಡಿಸಲಾಗಿದೆ. ವಿವಿಧ ರಾಜಗಳು, ನಾಡಿನ ವಿವಿಧೆಡೆಗಳು ಕಲಾವಿದರು ಈ ಶಿಬಿರದಲ್ಲಿ ಕಲಾಕೃತಿಗಳನ್ನು ರಚಿಸಲಿದ್ದಾರೆ.

ಉದ್ಘಾಟನೆಗೆ ಮುಖ್ಯಮಂತ್ರಿಗೆ ಆಹ್ವಾನ

ಉತ್ಸವ 28ರಂದು ಶುರುವಾಗಲಿದೆ. ಉತ್ಸವ ಉದ್ಘಾಟನೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗಿದೆ.ಕಾಮಧೇನು ಗಣಪತಿ ದೇಗುಲದಿಂದ ಎಂ.ಜಿ. ರಸ್ತೆ ಮಾರ್ಗವಾಗಿ ಮೆರವಣಿಗೆ ನಡೆಯಲಿದೆ. 120ಕ್ಕೂ ಹೆಚ್ಚು ಜನಪದ ಕಲಾತಂಡಗಳು ಪಾಲ್ಗೊಳ್ಳಲಿವೆ. 28ರಂದು ಸಂಜೆ 6.30ಕ್ಕೆ ಜನಪದ ಜಾತ್ರೆ ನಡೆಯಲಿದೆ.

ನಾಟಕೋತ್ಸವ

28ರಂದು ಕುವೆಂಪು ಕಲಾಮಂದಿರದಲ್ಲಿ ‘ಹಗರಣ’, ‘ಆಷಾಡದ ಒಂದು ದಿನ’ ನಾಟಕಗಳು, ಚಿಕ್ಕಮಗಳೂರು ಇತಿಹಾಸ ದರ್ಶನ–ಧ್ವನಿ ಮತ್ತು ಬೆಳಕಿನ ಪ್ರದರ್ಶನ ಏರ್ಪಡಿಸಲಾಗಿದೆ.

ಸಿನಿಮೋತ್ಸವ

28ರಂದು ‘ಮೂಕಜ್ಜಿಯ ಕನಸುಗಳು’, ‘ರಾಮಾ ರಾಮಾರೇ’ 29ರಂದು ‘ಕಾಳಿದಾಸ ಕನ್ನಡ ಮೇಷ್ಟ್ರು’ ಹಾಗೂ ‘ಬೆಲ್‌ ಬಾಟಂ’ ಮಾರ್ಚ್‌ 1ರಂದು ‘ಹೆಬ್ಬೆಟ್ಟು ರಾಮಕ್ಕ’ ಮತ್ತು ‘ರಾಜಕುಮಾರ’ ಸಿನಿಮಾಗಳನ್ನು ಮಿಲನ್‌ ಮತ್ತು ನಾಗಲಕ್ಷ್ಮಿ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಗುವುದು. ಬೆಳಿಗ್ಗೆ 10.30 ಮತ್ತು ಮಧ್ಯಾಹ್ನ 2.30ಒಟ್ಟು ಎರಡು ಪ್ರದರ್ಶನಗಳಿರುತ್ತವೆ. ಪ್ರವೇಶ ಉಚಿತ.

29ರಂದು ಕುವೆಂಪು ಕಲಾಮಂದಿರದಲ್ಲಿ ನೃತ್ಯೋತ್ಸವ ಮತ್ತು ಜಿಲ್ಲಾ ಬ್ಯಾರಿ ಸಾಂಸ್ಕೃತಿಕ ಮೇಳ ಹಮ್ಮಿಕೊಳ್ಳಲಾಗಿದೆ. ಸಂಜೆ 6 ಗಂಟೆಗೆ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾ ಆಟದ ಮೈದಾನದಲ್ಲಿ ಸಂಗೀತ ಸಂಭ್ರಮ ಏರ್ಪಡಿಸಲಾಗಿದೆ. ಹಾಸ್ಯ ಮತ್ತು ಭಾವಯೋಗ ನೃತ್ಯ ವಿಶೇಷ ಆಕರ್ಷಣೆಗಳು. ತಂಜಾವೂರು ಕಲಾತಂಡಗಳು ಪ್ರದರ್ಶನ ನೀಡಲಿವೆ.

ವಸ್ತು ಪ್ರದರ್ಶನ

ಮೂರು ದಿನ ವಸ್ತು ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ. 100 ಮಳಿಗೆಗಳು ಇರಲಿವೆ.

ಆಹಾರ ಮೇಳ

ಹೊಸ ಮನೆ ಬಡಾವಣೆ ಭಾಗದಿಂದ ಅರಣ್ಯ ಇಲಾಖೆ ಕಚೇರಿವರೆಗೆ ಆಹಾರದ ಮೇಳದ ಮಳಿಗೆಗಳು ಇರಲಿವೆ. ಸಸ್ಯಹಾರಿ, ಮಾಂಸಹಾರಿ, ಉತ್ತರ ಮತ್ತು ದಕ್ಷಿಣ ಕರ್ನಾಟಕ ವೈವಿಧ್ಯ ಖಾದ್ಯಗಳು ಇರಲಿವೆ.

ಬೀದಿ ಉತ್ಸವ

ವೈವಿಧ್ಯಮಯ ಸಂಸ್ಕೃತಿ ಪ್ರತಿನಿಧಿಸುವ ಕಲೆಗಳ ಪ್ರದರ್ಶನದ ಬೀದಿ ಉತ್ಸವನ್ನು ಎಂ.ಜಿ ರಸ್ತೆಯಲ್ಲಿ ನಡೆಯಲಿದೆ. ತೊಗಲುಗೊಂಬೆ, ಅಂಟಿಗೆ-ಪಿಂಟಿಗೆ, ಗೊಂಬೆ ಕುಣಿತ, ಸರ್ಕಸ್, ಕಣಿಶಾಸ್ತ್ರ ಸಹಿತ ಹಲವಾರು ದೇಶಿ ಕಲೆಗಳು ಇರಲಿವೆ.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ವಿಜಯಕುಮಾರ ಇದ್ದರು.

ಹೆಲಿ ಟೂರಿಸಂ

ಉತ್ಸವಕ್ಕೆ ಮೆರಗು ನೀಡಲು ಇದೇ 28ರಿಂದ ಮಾರ್ಚ್‌1ರವರೆಗೆ ‘ಹೆಲಿ ಟೂರಿಸಂ’ ಏರ್ಪಡಿಸಲಾಗಿದೆ. ಐಡಿಎಸ್‌ಜಿ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.ಹೆಲಿಕಾಪ್ಟರ್‌ನಲ್ಲಿ ಏಳು ನಿಮಿಷ ನಗರ, ಗಿರಿ ಪ್ರದೇಶವನ್ನು ಬಾನಂಗಳದಲ್ಲಿ ಪ್ರದರ್ಶನ ಮಾಡುವ ಅವಕಾಶ ಇದಾಗಿದೆ.ಐಡಿಎಸ್‌ಜಿ ಕಾಲೇಜ್‌ ಮೈದಾನ, ಜಿಲ್ಲಾಧಿಕಾರಿ ಕಚೇರಿ, ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಟಿಕೆಟ್‌ ಕೌಂಟರ್‌ಗಳು ಇರಲಿವೆ.

www.helitaxi.com ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿಯೂ ಟಿಕೆಟ್‌ ಬುಕ್‌ ಮಾಡಬಹುದು.

ಚಿಕ್ಕಮಗಳೂರು ನಗರ ದರ್ಶನಕ್ಕೆ (ಏಳು ನಿಮಿಷ ಅವಧಿ) ಒಬ್ಬರಿಗೆ ₹ 2,800, ಚಿಕ್ಕಮಗಳೂರು ಹಾಗೂ ಗಿರಿ ಶ್ರೇಣಿ ದರ್ಶನಕ್ಕೆ (15ನಿಮಿಷ) ಒಬ್ಬರಿಗೆ ₹ 5000 ಟಿಕೆಟ್‌ ದರ ನಿಗದಿಪಡಿಸಲಾಗಿದೆ.

ಎಂ.ಜಿ. ರಸ್ತೆ: ವಾಹನಕ್ಕೆ ನಿರ್ಬಂಧ

ಜಿಲ್ಲಾ ಉತ್ಸವ ನಿಟ್ಟಿನಲ್ಲಿ ಇದೇ 28ರಿಂದ ಮಾರ್ಚ್‌ 1ರವರೆಗೆ ಎಂ.ಜಿ.ರಸ್ತೆಯಲ್ಲಿ ಸಂಜೆ 6ರಿಂದ ರಾತ್ರಿ 11 ಗಂಟೆವರೆಗೆ ವಾಹನಗಳಿಗೆ ನಿರ್ಬಂಧ ವಿಧಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT