ಚಿಕ್ಕಮಗಳೂರು: ಕಂದಾಯ ಸಚಿವ ಆರ್.ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್ ಎಂಬಾತ ಹಣಕ್ಕಾಗಿ ಬೇಡಿಕೆ ಇಟ್ಟು, ಬೆದರಿಕ ಹಾಕಿದ್ದಾರೆ ಎಂದು ಶೃಂಗೇರಿಯ ಉಪ ನೋಂದಣಾಧಿಕಾರಿ ಎಚ್.ಎಸ್.ಚಲುವರಾಜು ದೂರು ದಾಖಲಿಸಿದ್ದಾರೆ.
ಶೃಂಗೇರಿಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಜ.24ಕ್ಕೆ ಶೃಂಗೇರಿಗೆ ಸಚಿವ ಅಶೋಕ್ ಭೇಟಿ ನಿಗದಿಯಾಗಿತ್ತು. 7760666222 ಮೊಬೈಲ್ ಸಂಖ್ಯೆಯಿಂದ ಸಚಿವರ ಪ್ರವಾಸ ವೇಳಾಪಟ್ಟಿಯನ್ನು ವ್ಯಕ್ತಿಯೊಬ್ಬರು ನನಗೆ ರವಾನಿಸಿದ್ದರು ಎಂದು ತಿಳಿಸಿದ್ದಾರೆ.
24ರಂದು 10 ಗಂಟೆ ಸಮಯದಲ್ಲಿ 7760666222 ಮೊಬೈಲ್ ಸಂಖ್ಯೆಯಿಂದ ಒಬ್ಬರು ಫೋನ್ ಮಾಡಿದರು. ಸಚಿವ ಅಶೋಕ್ ಅವರು ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡರು. ಶೃಂಗೇರಿಗೆ ಸಂಜೆ ಸಚಿವರು ಬರುತ್ತಾರೆ ಭೇಟಿಯಾಗುವಂತೆ ಸೂಚಿಸಿದರು ಎಂದು ವಿವರಿಸಿದ್ದಾರೆ.
ಅಂದರಂತೆ ಸಚಿವರನ್ನು ಭೇಟಿಯಾಗಲು ಆದಿಚುಂಚನಗರಿ ಸಮುದಾಯ ಭವನಕ್ಕೆ ಸಂಜೆ 6 ಗಂಟೆಗೆ ಹೋದೆ. ಸಚಿವರ ಆಪ್ತ ಸಹಾಯಕ ಗಂಗಾಧರ ಎಂಬುವವರು ಸಮದಾಯ ಭವನ ಕೊಠಡಿಯೊಳಕ್ಕೆ ಕರೆದೊಯ್ದರು. ಹಣಕ್ಕೆ ಬೇಡಿಕೆ ಇಟ್ಟರು. ರಾತ್ರಿ 7ರಿಂದ 8.30ರ ಸಮಯದಲ್ಲಿ ಇದು ನಡೆಯಿತು ಎಂದು ಉಲ್ಲೇಖಿಸಿದ್ದಾರೆ.
’ನಾನು ಯಾರಿಗೂ ಈ ರೀತಿ ಹಣ ನೀಡುವ ಅಥವಾ ಯಾರಿಂದಲೂ ಹಣ ಪಡೆಯುವ ಅಭ್ಯಾಸ ಇಟ್ಟುಕೊಂಡಿಲ್ಲ ಎಂದು ಸ್ಥಳದಲ್ಲಿಯೇ ಆತನಿಗೆ ತಿಳಿಸಿ, ಬೇಡಿಕೆಯನ್ನು ತಿರಸ್ಕರಿಸಿದೆ. ಇದಕ್ಕೆ ಒಪ್ಪದ ಆತ ನಿಮ್ಮನ್ನು ನೋಡಿಕೊಳ್ಳುತ್ತೇನೆ‘ ಎಂದು ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಫೋನ್ ಸಂಭಾಷಣೆ ರೆಕಾರ್ಡಿಂಗ್ ಸಿ.ಡಿ, ವಾಟ್ಸ್ಆ್ಯಪ್ ಸಂದೇಶದ ಮುದ್ರಿತ ಪ್ರತಿಯನ್ನು ದೂರಿನೊಂದಿಗೆ ಲಗತ್ತಿಸಿರುವುದಾಗಿ ತಿಳಿಸಿದ್ದಾರೆ. ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು, ತನಗೆ ರಕ್ಷಣೆಬೇಕು ಎಂದು ಚಲುವರಾಜು ಕೋರಿದ್ದಾರೆ.