ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಯು ಮಾಹಿತಿ ಮುಚ್ಚಿಡುವಂತಿಲ್ಲ: ಶೃಂಗೇರಿ ಕ್ಷೇತ್ರ ಚುನಾವಣಾಧಿಕಾರಿ ಸೂಚನೆ

ಶೃಂಗೇರಿ ಕ್ಷೇತ್ರ ಚುನಾವಣಾಧಿಕಾರಿ ವೇದಮೂರ್ತಿ ಸೂಚನೆ
Last Updated 1 ಏಪ್ರಿಲ್ 2023, 5:38 IST
ಅಕ್ಷರ ಗಾತ್ರ

ಕೊಪ್ಪ: ‘ಅಭ್ಯರ್ಥಿಗಳು ಸಲ್ಲಿಸುವ ನಾಮಪತ್ರದ ಯಾವ ಕಾಲಂ ಅನ್ನೂ ಖಾಲಿ ಬಿಡಬಾರದು. ಪ್ರಮಾಣಪತ್ರದಲ್ಲಿ ಯಾವುದೇ ಮಾಹಿತಿಯನ್ನೂ ಮರೆಮಾಚಬಾರದು’ ಎಂದು ಶೃಂಗೇರಿ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಟಿ.ಆರ್. ವೇದಮೂರ್ತಿ ಹೇಳಿದರು.

ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ವಿವಿಧ ಪಕ್ಷದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ‘ನಾಮಪತ್ರ ಸಲ್ಲಿಸಲು ಬರುವಾಗ 3 ವಾಹನಗಳಿಗೆ ಮಾತ್ರ ಅವಕಾಶವಿದ್ದು, ಅದಕ್ಕೂ ಪಕ್ಷದ ಹೆಸರಿನಲ್ಲಿ ಅನುಮತಿ ಪಡೆದಿರಬೇಕು’ ಎಂದರು.

‘ನಾಮಪತ್ರ ಸಲ್ಲಿಸುವಾಗ ಚುನಾವಣಾಧಿಕಾರಿ ಕಚೇರಿಯೊಳಗೆ ಬರಲು ಅಭ್ಯರ್ಥಿ ಸೇರಿದಂತೆ 5 ಮಂದಿಗೆ ಅವಕಾಶವಿದೆ. ಚುನಾವಣೆ ಸಂದರ್ಭದ ಎಲ್ಲಾ ಖರ್ಚಿನ ಲೆಕ್ಕವನ್ನೂ ಕೊಡಬೇಕು. ಪಕ್ಷದವರು ತಮ್ಮ ವಾಹನಗಳಲ್ಲಿ ಮತದಾರರನ್ನು ಕರೆತರುವಂತಿಲ್ಲ’ ಎಂದು ಸೂಚಿಸಿದರು.

‘ಸ್ಟಾರ್ ಪ್ರಚಾರಕರನ್ನು ಕರೆಸಿದಾಗ ಅವರು ಪಕ್ಷದ ಹೆಸರಿನಲ್ಲಿ ಮತ ಕೇಳಿದರೆ, ಸಭೆ ಅಥವಾ ಸಮಾರಂಭದ ಖರ್ಚು ಪಕ್ಷದ ಹೆಸರಿಗೆ ಸೇರುತ್ತದೆ. ಮತ ನೀಡುವಂತೆ ಅಭ್ಯರ್ಥಿ ಹೆಸರನ್ನು ಹೇಳಿದರೆ ಆ ಖರ್ಚು ವೆಚ್ಚ ಅಭ್ಯರ್ಥಿ ಹೆಸರಿಗೆ ಸೇರುತ್ತದೆ. ಪ್ರಚಾರಕ್ಕೆ ಬಳಸುವ ವಾಹನಗಳಿಗೆ ಅನುಮತಿ ಅಗತ್ಯ’ ಎಂದು ಹೇಳಿದರು.

‘ಪ್ರಚಾರಕ್ಕೆ ಬಳಸುವ ಕರಪತ್ರಗಳಲ್ಲಿ ಅವುಗಳನ್ನು ಮುದ್ರಿಸಿದ ಪ್ರಿಂಟಿಂಗ್ ಪ್ರೆಸ್ ಹೆಸರು ನಮೂದಿಸಿರಬೇಕು. ಮತದಾರರಿಗೆ ಆಮಿಷವೊಡ್ಡುವುದು ಇತ್ಯಾದಿ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದರು.

ಕೊಪ್ಪ ತಹಶೀಲ್ದಾರ್ ವಿಮಲ ಸುಪ್ರಿಯಾ, ಶೃಂಗೇರಿ ತಹಶೀಲ್ದಾರ್ ಗೌರಮ್ಮ, ಎನ್.ಆರ್. ಪುರ ತಹಶೀಲ್ದಾರ್ ರಾಜೀವ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜಶೇಖರ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಚೇತನ್, ಪದ್ಮಲತಾ, ಶಿಕ್ಷಣ ಇಲಾಖೆಯ ಆರ್.ಡಿ. ರವೀಂದ್ರ, ಸರ್ಕಲ್ ಇನ್ ಸ್ಪೆಕ್ಟರ್ ಮಂಜು, ಜೆಡಿಎಸ್ ಮುಖಂಡರಾದ ಎಸ್.ಸಂಜಯ್, ವಿನಯ್ ಕಣಿವೆ, ಸುರೇಶ್ ಶೆಟ್ಟಿ, ಫ್ರಾನ್ಸಿಸ್ ಕಾರ್ಡೋಜ, ಬಿಜೆಪಿ ಮುಖಂಡ ಎನ್.ಆರ್.ಪುರದ ವಿಜಯಕುಮಾರ್, ಕಾಂಗ್ರೆಸ್ ಮುಖಂಡರಾದ ಎಚ್.ಶಶಿಕುಮಾರ್, ನುಗ್ಗಿ ಮಂಜುನಾಥ್ ಇದ್ದರು.

ಆಕ್ಷೇಪ: ಪಕ್ಷದ ಕಚೇರಿ ಎದುರು ಹಾಕಿದ್ದ ಬ್ಯಾನರ್ ತೆರವುಗೊಳಿಸಲು ಸೂಚನೆ ಕೊಟ್ಟು, ನಂತರ ತೆರವುಗೊಳಿಸಬೇಕಿತ್ತು. ಆದರೆ ಅಧಿಕಾರಿಗಳು ಏಕಾಏಕಿ ಬ್ಯಾನರ್ ಹರಿದು ಹಾಕಿದ್ದಾರೆ, ಇಂತಹ ನಡೆ ಖಂಡನೀಯ’ ಎಂದು ಕಾಂಗ್ರೆಸ್ ಮುಖಂಡ ಎಚ್.ಎಸ್.ಇನೇಶ್ ಆಕ್ಷೇಪಿಸಿದರು.

ಜೆಡಿಎಸ್ ಕ್ಷೇತ್ರ ಘಟಕದ ಅಧ್ಯಕ್ಷ ಭಂಡಿಗಡಿ ದಿವಾಕರ ಭಟ್, ‘ನೀತಿ ಸಂಹಿತೆ ಎಂದ ಮೇಲೆ ಎಲ್ಲಾ ಕಡೆಗೂ ಅನ್ವಯಿಸಬೇಕಲ್ಲವೇ, ಬಸ್‌ಗಳಲ್ಲಿ ಯಾಕೆ ಇನ್ನೂ ಮುಖ್ಯಮಂತ್ರಿಯ ಫೋಟೊ ಇದೆ’ ಎಂದು ಪ್ರಶ್ನಿಸಿದರು. ಕ್ರಮ ಕೈಗೊಳ್ಳುವುದಾಗಿ ಚುನಾವಣಾಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT