ನರಸಿಂಹರಾಜಪುರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮಸ್ಯೆಗಳನ್ನು ಆಲಿಸಿ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದಲ್ಲೂ ಪೊಲೀಸ್ ಇಲಾಖೆಯಿಂದ ಪ್ರತಿ ತಿಂಗಳು ಸಭೆ ಆಯೋಜಿಸಲಾಗುವುದು ಎಂದು ಪೊಲೀಸ್ ಇನ್ಸ್ಪೆಕ್ಟರ್ ವಸಂತ್ ಶಂಕರ್ ಭಾಗವತ್ ತಿಳಿಸಿದರು.
ಈಚೆಗೆ ಮೃತಪಟ್ಟ ಯೋಧ ಎಂ.ಎನ್. ಗಣೇಶ್ ಅವರಿಗೆ ಶ್ರದ್ಧಾಂಜಲಿ ಹಾಗೂ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿನಿ ಕಾವ್ಯಶ್ರೀಗೆ ಸನ್ಮಾನ ಸಮಾರಂಭ ತಾಲ್ಲೂಕು ಛಲವಾದಿ ಮಹಾಸಭಾ ವತಿಯಿಂದ ಬಾವಿಹಟ್ಟಿಯ ಮುತ್ತಿನಮ್ಮ ಗದ್ದುಗೆ ವ್ಯಾಪ್ತಿಯಲ್ಲಿ ಭಾನುವಾರ ನಡೆಯಿತು. ಈ ವೇಳೆ ಮಾತನಾಡಿದ ಅವರು, ‘ಪೊಲೀಸ್ ಠಾಣೆಯಲ್ಲಿ ಸಭೆ ನಡೆಸುವುದರ ಜತೆಗೆ ಗ್ರಾಮ ಮಟ್ಟದಲ್ಲಿ ಸಮುದಾಯದವರನ್ನು ಸೇರಿಸಿ ಸಮಸ್ಯೆ ಆಲಿಸಲಾಗುವುದು’ ಎಂದರು.
ಛಲವಾದಿ ಮಹಾಸಭಾದ ಕಾರ್ಯದರ್ಶಿ ಮಾತನಾಡಿ, ‘ಸಮುದಾಯದವರಾಗಿದ್ದ ಯೋಧ ಗಣೇಶ್ ಅವರ ಅಕಾಲಿಕ ನಿಧನದಿಂದ ದೇಶಕ್ಕೆ ಹಾಗೂ ಕುಟುಂಬಕ್ಕೆ ನಷ್ಟವಾಗಿದೆ. ಕಾವ್ಯಶ್ರೀ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ 580 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದು, ಅವರ ಸಾಧನೆ ಇತರರಿಗೆ ಪ್ರೇರಣೆಯಾಗಲಿ’ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿಯ ಮುಖಂಡ ರಾಮು ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿನಿ ಕಾವ್ಯಶ್ರೀ, ಸಾಧನೆ ಮಾಡಿದವರು ಗುರುತಿಸಿ ಪ್ರೋತ್ಸಾಹಿಸಿದರೆ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಎಂದರು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್, ಮುತ್ತಿನಮ್ಮ ದೇವಸ್ಥಾನ ಸಮಿತಿಯ ಅಧ್ಯಕ್ಷ ರವಿಪ್ರಕಾಶ್, ಛಲವಾದಿ ಮಹಾಸಭಾದ ಖಜಾಂಚಿ ಚಂದ್ರಶೇಖರ್, ಲತಾ, ಹನುಮಂತ, ಬಾಬು, ಪ್ರೇಮಾ, ಶಿವನಗರ ಸಣ್ಣಪ್ಪ, ಭಾನುಮತಿ, ಪವಿತ್ರಾ ಇದ್ದರು.