ಅಪೂರ್ವ ಸ್ವಸಹಾಯ ಸಂಘದ ದಶಮಾನೋತ್ಸವ

ಕುಂದೂರು(ಬಾಳೆಹೊನ್ನೂರು): ಸದಾ ಎಲ್ಲರಿಗೂ ಒಳಿತನ್ನು ಬಯಸುವ ಏಕೈಕ ರಾಷ್ಟ್ರ ಭಾರತವಾಗಿದೆ. ಗುರುಕುಲ ಶಿಕ್ಷಣ ಇಂದಿಗೂ ಮೌಲ್ಯಯುತವಾಗಿದ್ದು, ಅದರ ಶ್ರೀಮಂತಿಕೆಯಿಂದ ಭಾರತ ಮತ್ತಷ್ಟು ಬೆಳಗುತ್ತಿದೆ. ಮುಂದಿನ ದಿನಗಳಲ್ಲಿ ಸನಾತನ ಧರ್ಮಸತ್ರದ ಪರಿಕಲ್ಪನೆ ಸಾಕಾರಗೊಳ್ಳಬೇಕು ಎಂದು ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಹೇಳಿದರು.
ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದೂರಿನ ಸಭಾ ಭವನದಲ್ಲಿ ಅಪೂರ್ವ ಸ್ವ ಸಹಾಯ ಸಂಘದ ದಶಮಾನೋತ್ಸವ ಸಂಭ್ರಮಾಚರಣೆ ಮತ್ತು ಲೋಕ ಕಲ್ಯಾಣಾರ್ಥ ಶ್ರೀರಾಮ ತಾರಕ ಹೋಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಂಕಣಕಾರ ಕಾರ್ಕಳದ ಆದರ್ಶ ಗೋಖಲೆ ಉಪನ್ಯಾಸ ನೀಡಿದರು.
ಸಂಘದ ಕಾರ್ಯದರ್ಶಿ ಕೆ.ಎಸ್.ಪ್ರಕಾಶ್ ಮಾತನಾಡಿ, ಸಂಘ ಕಳೆದ ಹತ್ತು ವರ್ಷಗಳಲ್ಲಿ ಗಳಿಸಿದ ಲಾಭದ ಒಂದಷ್ಟು ಪ್ರಮಾಣವನ್ನು ಪ್ರತಿವರ್ಷ ಸಮಾಜ ಸೇವೇಗೆ ಮೀಸಲಿಟ್ಟು ಹತ್ತು ಹಲವು ಕಾರ್ಯಗಳನ್ನು ಮಾಡಿದೆ. ಎಲ್ಲಾ ಸದಸ್ಯರ ಸಹಕಾರ, ಸಲಹೆಯಿಂದ ಉತ್ತಮ ಪ್ರಗತಿ ಸಾಧಿಸಿದೆ ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಿಗೇರಿ ಬಾಲಕೃಷ್ಣಯ್ಯ, ತಿಮ್ಮಮ್ಮ, ವೀರಗಲ್ಲುಮಕ್ಕಿ ಜನಾರ್ಧನ, ಬಾಳೆಹೊನ್ನೂರಿನ ರಂಭಾಪುರಿ ಪೆಟ್ರೋಲ್ ಬಂಕ್ ಮಾಲೀಕ ಎಚ್. ಗೋಪಾಲ್, ಕೆ.ಜಿ.ಸಹದೇವ್, ರಕ್ಷಾ, ಭಾರತೀಯ ನೌಕಾಪಡೆಯ ಶ್ರೀನಾಥ್ ವೆಂಕಟರಮಣ ಶಾಸ್ತ್ರೀ, ಸೂರ್ಯನಾರಾಯಣ ಸಿ.ಸುಬ್ರಮಣ್ಯ ಅವರನ್ನು ಸನ್ಮಾನಿಸಲಾಯಿತು.
ಕೆಮ್ಮಣ್ಣಿನ ಶ್ರೀ ಕಾಮಧೇನು ಗೋ ಸೇವಾ ಕೇಂದ್ರಕ್ಕೆ ಸಂಘದ ವತಿಯಿಂದ ಸಾಂಕೇತಿಕವಾಗಿ ಮೇವಿನ ಪರಿಕರ ವಿತರಿಸಲಾಯಿತು. ಬಸ್ತಿಮಠದ ಶ್ರೀಗಳನ್ನು ಸ್ಥಳೀಯ ಧರ್ಮಸ್ಥಳ ಸಂಘದ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು. ಸ್ವಾಮೀಜಿ ಸಮ್ಮುಖದಲ್ಲಿ ಶ್ರೀರಾಮ ತಾರಕ ಹೋಮದ ಪೂರ್ಣಾಹುತಿ ನಡೆಯಿತು.
ಕಾಫಿ ಬೆಳೆಗಾರ ರಾಘವೇಂದ್ರ ಗುರು ಪ್ರಸಾದ್ ಹೆಬ್ಬಾರ್, ಸಂಘದ ಅಧ್ಯಕ್ಷ ಕೆ.ಆರ್.ಯೋಗೀಶ್, ಶಾಸಕ ಟಿ.ಡಿ.ರಾಜೇಗೌಡ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ಕಾಂಗ್ರೆಸ್ ಮುಖಂಡ ಎಚ್.ಎಂ. ಸತೀಶ್, ಕೆ.ಎಸ್.ರವೀಂದ್ರ, ಬಿಜೆಪಿ ಮೇಗುಂದಾ ಹೋಬಳಿ ಅಧ್ಯಕ್ಷ ಎ.ಸಿ.ಸಂತೋಷ್ ಅರನೂರು, ಚಿಮ್ಮನಕೊಡಿಗೆ ನಟರಾಜ್, ಜೆಡಿಎಸ್ ಶೃಂಗೇರಿ ಕ್ಷೇತ್ರಾಧ್ಯಕ್ಷ ದಿವಾಕರ ಭಟ್, ಕೃಷಿಕರಾದ ಹುಲ್ಸೆ ರತ್ನರಾಜ್ ಜೈನ್, ಜಯಪುರದ ಶಾಂತಕುಮಾರ್ ಜೈನ್, ಪುಷ್ಪಾ ರಾಜೇಗೌಡ, ಸಂಘದ ಸದಸ್ಯರುಗಳಾದ ಕೆ.ಆರ್.ನಾಗೇಶ್, ವಿ.ಜೆ.ರೋಹಿತ್ ಕುಮಾರ್, ಅಭಿಷೇಕ್, ಬಾಳೆಹೊನ್ನೂರಿನ ಸ್ವಯಂ ಸೇವಕ ಕೃಷ್ಣಭಟ್
ಸಾಕ್ಷಿ ಸದಾಶಿವ, ಶಿಕ್ಷಕ ಸುರೇಂದ್ರ ಮಾಸ್ತರ್. ಚೈತನ್ಯ ವೆಂಕಿ, ಕೆ.ಜಿ.ಪ್ರಸನ್ನ ಕುಮಾರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.