ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಗುರುವಾರ ಒಬ್ಬರಿಗೆ ಕೋವಿಡ್–19 ದೃಢಪಟ್ಟಿದೆ, ಒಬ್ಬರು ಗುಣಮುಖರಾಗಿದ್ದು ಬಿಡುಗಡೆ ಮಾಡಲಾಗಿದೆ. 41 ಸಕ್ರಿಯ ಪ್ರಕರಣಗಳು ಇವೆ.
ಕಡೂರು ತಾಲ್ಲೂಕಿನ 19 ವರ್ಷದ ಪುರುಷಗೆ (ಪಿ–16583) ಸೋಂಕು ಪತ್ತೆಯಾಗಿದೆ. ಸೋಂಕು ದೃಢಪಟ್ಟು ಶಿವಮೊಗ್ಗದ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟ ಕಡೂರಿನ ವ್ಯಕ್ತಿಯ (ಪಿ–14399) ಪುತ್ರ ಈತ.
28 ವರ್ಷದ ಪುರುಷ (ಪಿ–9759) ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
335 ಮಾದರಿ ಪರೀಕ್ಷೆಗೆ ರವಾನೆ
ಕೊರೊನಾ ವೈರಾಣು ಸೋಂಕು ಪತ್ತೆ ನಿಟ್ಟಿನಲ್ಲಿ 335 ಮಂದಿಯ ಗಂಟಲಿನ ದ್ರವ ಮತ್ತು ಮೂಗಿನ ದ್ರವ ಮಾದರಿಯನ್ನು ಗುರುವಾರ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
13 ಮಾದರಿ ಪರೀಕ್ಷೆ ವರದಿ ಬಂದಿದ್ದು, ಸೋಂಕು ದೃಢಪಟ್ಟಿಲ್ಲ. 1620 ಮಂದಿಯ ವರದಿ ಬರಬೇಕಿದೆ. 334 ಮಂದಿಯನ್ನು ಪ್ರತ್ಯೇಕ ನಿಗಾ ವಾರ್ಡ್ಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್.ಕೆ.ಮಂಜುನಾಥ್ ತಿಳಿಸಿದ್ದಾರೆ.