ವೀರಗಲ್ಲುಮಕ್ಕಿ (ಬಾಳೆಹೊನ್ನೂರು): ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಗಲ್ಲುಮಕ್ಕಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಮಕ್ಕಳಲ್ಲಿ ದಿಢೀರ್ ಆಗಿ ಚರ್ಮರೋಗ ಕಾಣಿಸಿಕೊಳ್ಳುತ್ತಿದ್ದು, ಪೋಷಕರಲ್ಲಿ ಆತಂಕ ಎದುರಾಗಿದೆ.
ಆರಂಭದಲ್ಲಿ ಅಂಗನವಾಡಿ ಮಕ್ಕಳ ಕೈ ಹಾಗೂ ಕಾಲುಗಳಲ್ಲಿ ಸಣ್ಣ ಸಣ್ಣ ಗುಳ್ಳೆಗಳಾಗಿದ್ದು ತುರಿಕೆ ಕಾಣಿಸಿಕೊಂಡಿದೆ. ಆನಂತರ ಅದು ಇನ್ನೂ ಹಲವಾರು ಮಕ್ಕಳಿಗೆ ಹಬ್ಬಿದ್ದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಕೆಲವು ಮಕ್ಕಳನ್ನು ಪೋಷಕರು ಜಯಪುರ ಹಾಗೂ ಬಾಳೆಹೊನ್ನೂರಿನ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದ್ದಾರೆ. ಔಷಧಿ ಪಡೆದ ಎರಡು ಮೂರು ತಿಂಗಳವರೆಗೆ ಕಾಣಿಸಿಕೊಳ್ಳದ ಗುಳ್ಳೆಗಳು ಮತ್ತೆ ವಿದ್ಯಾರ್ಥಿಗಳ ಮೈ ಮೇಲೆಲ್ಲಾ ಕಾಣಿಸಿಕೊಂಡು ತೀವ್ರ ತುರಿಕೆ ಉಂಟುಮಾಡುತ್ತಿವೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ವ್ಯಾಧಿ ನಿಧಾನವಾಗಿ ಮನೆ ಸದಸ್ಯರಿಗೂ ಹರಡುತ್ತಿದೆ. ಜಿಲ್ಲಾಡಳಿತ ತಜ್ಞ ವೈದ್ಯರನ್ನು ನೇಮಿಸಿ ತಪಾಸಣೆ ನಡೆಸುವಂತೆ ಪೋಷಕರು ಆಗ್ರಹಿಸಿದ್ದಾರೆ.