ದೇವೀರಮ್ಮ ದೀಪೋತ್ಸವ ಇಂದಿನಿಂದ- ಗ್ರಾಮಸ್ಥರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ

ಚಿಕ್ಕಮಗಳೂರು: ತಾಲ್ಲೂಕಿನ ಬಿಂಡಿಗಾಮಲ್ಲೇನಹಳ್ಳಿಯ ಆದಿಶಕ್ತಿ ದೇವೀರಮ್ಮನವರ ದೀಪೋತ್ಸವ ನ.3ರಿಂದ 6ರವರೆಗೆ ಜರುಗಲಿದೆ. 3ರಂದು ಬೆಟ್ಟದಲ್ಲಿ ಜರುಗುವ ದೀಪೋತ್ಸವಕ್ಕೆ ಗ್ರಾಮಸ್ಥರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಕೋವಿಡ್ ನಿಟ್ಟಿನಲ್ಲಿ ದೀಪೋತ್ಸವ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಮಾಸ್ಕ್ ಧಾರಣೆ, ಅಂತರ ಪಾಲನೆ, ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ ಮಾಡಲಾಗಿದೆ. 4, 5 ಮತ್ತು 6ರಂದು ಸಾರ್ವಜನಿಕರಿಗೆ ಬಿಂಡಿಗಾಮಲ್ಲೇನಹಳ್ಳಿ ದೇಗುಲದಲ್ಲಿ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಲ್ಲೇನಹಳ್ಳಿಯ ಸರ್ಕಾರ ಪದವಿಪೂರ್ವ ಕಾಲೇಜು ಆವರಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಮಲ್ಲೇನಹಳ್ಳಿಯ ದೇವೀರಮ್ಮ ಜಾತ್ರಾ ಮಹೋತ್ಸವಕ್ಕೆ ವಿದ್ಯುತ್ ದೀಪಾಲಂಕಾರ ಸಹಿತ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ದೇಗುಲ ಸಮಿತಿಯ ಕುಲಶೇಖರ ‘ಪ್ರಜಾವಾಣಿ’ಗೆ ತಿಳಿಸಿದರು.
3ರಂದು ನಸುಕಿನಲ್ಲಿ ಬೆಟ್ಟದಲ್ಲಿ ಪೂಜೆ, ಅಭಿಷೇಕ, ಕೈಂಕರ್ಯಗಳು ಜರುಗಲಿವೆ. ಬೆಟ್ಟಕ್ಕೆ ಹೊರಗಿನ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಬಿಂಡಿಗಾಮಲ್ಲೇನಹಳ್ಳಿಯ ದೇಗುಲದಲ್ಲಿ 4ರಂದು ವಿಶೇಷ ಪೂಜೆಗಳು ನೆರವೇರಲಿವೆ. ಬೆಳಿಗ್ಗೆ 9 ಗಂಟೆಗೆ ದೇಗುಲದ ಬಾಗಿಲು ತೆರೆವ ಕೈಂಕರ್ಯ ನೆರವೆರಲಿದೆ. ರಾತ್ರಿ 7 ಗಂಟೆಗೆ ಬೆಣ್ಣೆ ಬಟ್ಟೆ ಸುಡುವ ಕಾಯಕ ನಡೆಯಲಿದೆ.
5ರಂದು ರಾತ್ರಿ ಅಗ್ನಿಕುಂಡ ಪೂಜೆ, ಕುಂಕುಮಾರ್ಚನೆ ಮೊದಲಾದ ಕೈಂಕರ್ಯಗಳು ನಡೆಯಲಿವೆ.
6ರಂದು ಬೆಳಿಗ್ಗೆ (ಸೂರ್ಯೋದಯ) ಕೆಂಡಾರ್ಚನೆ, ಹರಕೆ ಒಪ್ಪಿಸುವ ಕೈಂಕರ್ಯಗಳು ಜರಗುಲಿವೆ. ದೇವೀರಮ್ಮ ಜಾತ್ರಾಮಹೋತ್ಸವ ಸಂಜೆ ಸಂಪನ್ನವಾಗಲಿದೆ.
ಈ ಬಾರಿ ಸರಳ ಆಚರಣೆ ಇರುವುದರಿಂದ ಮಲ್ಲೇನಹಳ್ಳಿ ಜಾತ್ರಮಹೋತ್ಸವಕ್ಕೆ ಕೆಎಸ್ಆರ್ಟಿಸಿ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡಿಲ್ಲ ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ. ವೀರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.