ಬಾಳೆಹೊನ್ನೂರು: ಪಟ್ಟಣದ ದುರ್ಗಾ ದೇವಿ ನವರಾತ್ರಿ ಪೂಜಾ ಸಮಿತಿ ವತಿ ಯಿಂದ ಪ್ರಸಕ್ತ ವರ್ಷದ ದುರ್ಗಾ ಪೂಜಾ ನವರಾತ್ರಿ ಮಹೋತ್ಸವ ಸೆಪ್ಟೆಂಬರ್ 26ರಿಂದ ಅ.5ರವರೆಗೆ ನಡೆಯಲಿದೆ ಎಂದು ಸಮಿತಿಯ ಕಾರ್ಯಾಧ್ಯಕ್ಷ ವೈ.ಮೋಹನ್ಕುಮಾರ್ ತಿಳಿಸಿದ್ದಾರೆ.
ಪಟ್ಟಣದ ಮಾರ್ಕಾಂಡೇಶ್ವರ ದೇವಾಲಯದಲ್ಲಿ ನಡೆದ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದುರ್ಗಾ ಮಹೋತ್ಸವವು 13ನೇ ವರ್ಷಕ್ಕೆ ಪಾದರ್ಪಣೆ ಮಾಡಿದ್ದು, ವಿಜೃಂಭಣೆಯಿಂದ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಎರಡು ವರ್ಷಗಳಿಂದ ಕೊರೊನಾ ಭೀತಿಯಲ್ಲಿ ಸರಳ ಉತ್ಸವ ನಡೆಸಲಾಗಿತ್ತು. ಈ ವರ್ಷ ಸಾಂಸ್ಕೃತಿಕ, ಧಾರ್ಮಿಕ ಕಾರ್ಯ ಪ್ರತಿವರ್ಷದಂತೆ ನಡೆಯಲಿವೆ ಎಂದರು.
ಸಮಿತಿ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ಸಂಚಾಲಕ ಆರ್.ಡಿ.ಮಹೇಂದ್ರ, ಕಾನೂನು ಸಲಹೆಗಾರ ಎಚ್.ಎಚ್.ಕೃಷ್ಣಮೂರ್ತಿ, ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಸಹಕೋಶಾಧಿಕಾರಿ ಚೈತನ್ಯ ವೆಂಕಿ, ಶಿವರಾಮ್ ಶೆಟ್ಟಿ ಇದ್ದರು.