ಬೀರೂರು: ಮಳೆಗೆ ತತ್ತರಿಸಿದ ಬೆಳೆ

ಬೀರೂರು: ಪಟ್ಟಣ ಮತ್ತು ಸುತ್ತಮುತ್ತ ಭಾನುವಾರ ಮಧ್ಯಾಹ್ನ ಏಕಾಏಕಿ ರಭಸದ ಮಳೆ ಸುರಿಯಿತು. ಗಾಳಿಹಳ್ಳಿಯಲ್ಲಿ ರೈತರು ಸಂಸ್ಕರಿಸುತ್ತಿದ್ದ ರಾಗಿಕಣಕ್ಕೆ ನೀರು ನುಗ್ಗಿದೆ.
ಗಾಳಿಹಳ್ಳಿಯಲ್ಲಿ ರೈತರು ಗ್ರಾಮದ ಹೊರವಲಯದಲ್ಲಿ ಕಣ ಮಾಡಿದ್ದು, ಅಮ್ಮನಹಬ್ಬದ ಸಲುವಾಗಿ ಕೆಲಸಕ್ಕೆ ಬಿಡುವು ಕೊಟ್ಟಿದ್ದರು. ಈಗಾಗಲೇ ಅರ್ಧಪಾಲು ಸಿದ್ಧವಾಗಿದ್ದ ರಾಗಿಯನ್ನು ತೂರಿದ ಬಳಿಕ ಮಾರಾಟ ಮಾಡಲು ಸಿದ್ಧತೆ ನಡೆದಿತ್ತು.
‘ಶುಕ್ರವಾರ ಬೆಳಗಿನ ಜಾವ ಸುರಿದ ಮಳೆಗೆ ನೆನೆದಿದ್ದ ರಾಗಿ ಈಗಾಗಲೇ ಮೊಳಕೆ ಕಟ್ಟಿದ್ದರೆ, ಭಾನುವಾರ ಅದಕ್ಕಿಂತ ಬಿರುಸಾಗಿ ಸುರಿದ ಮಳೆಗೆ ಅರ್ಧ ಧಾನ್ಯ ಕೊಚ್ಚಿಹೋಗಿದೆ. ಮಳೆ ಹೀಗೆ ಮುಂದುವರಿದರೆ ಮೇವು ಕೊಳೆಯುವ ಸಾಧ್ಯತೆಯಿದೆ, ಕಣದಲ್ಲಿದ್ದ ಹುರುಳಿ ಬೆಳೆಯೂ ಮಳೆಗೆ ಸಿಲುಕಿ ಹಾಳಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮೂರ್ತಿ ಮಾಹಿತಿ ನೀಡಿದರು.
ಇನ್ನು ಬೀರೂರು ಪಟ್ಟಣದಲ್ಲಿ ಸುರಿದ ಭಾರಿ ಮಳೆಗೆ ಚರಂಡಿಗಳು ತುಂಬಿ ಹರಿದು, ಹಳೆಪೇಟೆ ರಸ್ತೆ ಜಲಾವೃತಗೊಂಡಿದೆ. ಜತೆಗೆ, ತಗ್ಗಿನಲ್ಲಿದ್ದ ಹಲವು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತೆ ಆಗಿದೆ. ಅಕಾಲಿಕವಾಗಿ ಸುರಿಯುತ್ತಿರುವ ಮಳೆ ಹಲವು ರೈತರ ಸುಗ್ಗಿಯ ಖುಷಿಯನ್ನು ಕಸಿಯುತ್ತಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.