ನರಸಿಂಹರಾಜಪುರ: ‘ಡಿ.ಬಿ. ಚಂದ್ರೇಗೌಡರು ಶಾಸಕರಾಗಿದ್ದಾಗ ಪಟ್ಟಣ ವ್ಯಾಪ್ತಿಯಲ್ಲಿ ಬಡವರಿಗೆ ಮನೆ ನೀಡಲಾಗಿತ್ತು. ಅದನ್ನು ಬಿಟ್ಟರೆ 20 ವರ್ಷಗಳ ನಂತರ ಈಗ ಮನೆಗಳನ್ನು ನೀಡಲಾಗುತ್ತಿದೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಟ್ಟಣದ ಬಿಪಿಎಲ್ ಕುಟುಂಬದ 4 ಫಲಾನುಭವಿಗಳಿಗೆ ಮನೆ ನಿರ್ಮಿಸಲು ಡಾ.ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆ ಹಾಗೂ ವಾಜಪೇಯಿ ವಸತಿ ಯೋಜನೆಯಡಿ ಕಾರ್ಯಾದೇಶ ಪ್ರತಿ ವಿತರಣೆ ಮಾಡಿ ಅವರು ಮಾತನಾಡಿದರು.
ಪಟ್ಟಣದ ವ್ಯಾಪ್ತಿಯಲ್ಲಿ ನಿವೇಶನ ಹೊಂದಿದ 50 ಬಡವರಿಗೆ ಮನೆ ಮಂಜೂರಾಗಿದೆ. ಆದರೆ, ವಸತಿ ಯೋಜನೆಯ ನಿಯಮದಂತೆ 12 ಜನ ಮಾತ್ರ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 4 ಫಲಾನುಭವಿಗಳಿಗೆ ಇಂದು ಆದೇಶ ಪತ್ರ ನೀಡಲಾಗುತ್ತಿದೆ. ಮನೆ ಮಂಜೂರು ಮಾಡಲು ಸರ್ಕಾರಕ್ಕೆ ನಿಯೋಗ ಕರೆದುಕೊಂಡು ಹೋಗಲಾಗಿತ್ತು ಎಂದರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಶಾಸಕರು 50 ಮನೆ ಮಂಜೂರು ಮಾಡಿಸಿದ್ದಾರೆ. ಆದರೆ, ಕೆಲವು ನಿಯಮಗಳಿಂದಾಗಿ 12 ಜನ ಮಾತ್ರ ಅರ್ಜಿ ಸಲ್ಲಿಸುವಂತಾಗಿದೆ. ಗ್ರಾಮ ಠಾಣಾ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದವರಿಗೆ ಹಕ್ಕು ಪತ್ರ ನೀಡಲು ಸಾಧ್ಯವಾಗಿಲ್ಲ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಮಾತನಾಡಿ ಹಕ್ಕು ಪತ್ರ ನೀಡಬೇಕೆಂದು ಒತ್ತಾಯಿಸಿದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಉಮಾ, ಸದಸ್ಯರಾದ ಶೋಜಾ, ಸುರಯ್ಯಬಾನು, ಕುಮಾರಸ್ವಾಮಿ, ಮುನಾವರ್ ಪಾಷ, ಸೈಯದ್ ವಸೀಂ, ಮುಖ್ಯಾಧಿಕಾರಿ ಚಂದ್ರಕಾಂತ್ ,ಲಕ್ಷ್ಮಣ್ ಗೌಡ ಇದ್ದರು.