ನರಸಿಂಹರಾಜಪುರ: ‘ಪ್ರತಿಯೊಬ್ಬ ಜೆಡಿಎಸ್ ಕಾರ್ಯಕರ್ತನ ಮನೆಮುಂದೆ ಪಕ್ಷದ ಬಾವುಟ ಹಾರಿಸಬೇಕು. ಪ್ರತಿ ಬೂತ್ ಸಮಿತಿಯ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಸಬೇಕು’ ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಹೇಳಿದರು.
ಇಲ್ಲಿನ ಹಳೇಪೇಟೆಯಲ್ಲಿರುವ ತಾಲ್ಲೂಕು ಜೆಡಿಎಸ್ ಘಟಕದ ಕಚೇರಿಯಲ್ಲಿ ನಡೆದ ತಾಲ್ಲೂಕು ಘಟಕದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ಜೆಡಿಎಸ್ ರೈತ ಪರ, ಬಡವರ ಪರ ಹಾಗೂ ಜನಸಾಮಾನ್ಯರ ಪಕ್ಷವಾಗಿದ್ದು ಇಂತಹ ಪಕ್ಷದಲ್ಲಿ ಗುರುತಿಸಿಕೊಳ್ಳುವುದು ಹೆಮ್ಮೆಯ ವಿಚಾರವಾಗಿದೆ. ಪ್ರತಿಯೊಬ್ಬ ಕಾರ್ಯಕರ್ತನೂ ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು’ ಎಂದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ‘ಪಕ್ಷದ ಸಂಘಟನೆ ಕೇವಲ ಒಬ್ಬರಿಂದ ಸಾಧ್ಯವಿಲ್ಲ. ಸಾಂಘಿಕ ಪ್ರಯತ್ನ ಅಗತ್ಯವಾಗಿದೆ. ಬೂತ್ ಮಟ್ಟದ ಸಮಿತಿ ರಚಿಸಲು ಆ ಭಾಗದ ಹಿರಿಯ ಕಾರ್ಯಕರ್ತರು ಸಹಕರಿಸಬೇಕು .ತಲಾ 25 ಜನರನ್ನು ಪಕ್ಷಕ್ಕೆ ನೊಂದಾಯಿಸಬೇಕು’ ಎಂದರು.
ಮುಖಂಡರಾದ ಮರುಳಪ್ಪ, ಚಿನ್ನಯ್ಯ, ಸಿಜು, ಕೆ.ಸಿ.ನಾಗೇಶ, ರಘು ಶೆಟ್ಟಿ, ಜಾರ್ಜ್ ಮಾತನಾಡಿದರು. ಜೆಡಿಎಸ್ ಮುಖಂಡ ಶಿವದಾಸ್, ಉಪೇಂದ್ರ, ಸತ್ಯನಾರಾಯಣ ಶ್ರೇಷ್ಠಿ, ಶೆಟ್ಟಿಕೊಪ್ಪ ಎಂ.ಮಹೇಶ್ ಇದ್ದರು.
ತಾಲ್ಲೂಕಿನ ಕಾರ್ಯಕರ್ತರ ಸಮಸ್ಯೆ ಆಲಿಸಲು 11 ಜನರ ಸಾಮಾಜಿಕ ನ್ಯಾಯ ಸಮಿತಿ ರಚಿಸಲಾಯಿತು. ಜೆಡಿಎಸ್ ನಗರ ಘಟಕದ ಅಧ್ಯಕ್ಷರನ್ನಾಗಿ ಅಬ್ದುಲ್ ಸುಬಾನ್ ಅವರನ್ನು ಆಯ್ಕೆ ಮಾಡಲಾಯಿತು.