ಕಡೂರು: ಪಟ್ಟಣದ ಕೋಟೆಯಲ್ಲಿರುವ ಹೊಂಡ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬೆಳ್ಳಿಪ್ರಕಾಶ್ ಚಾಲನೆ ನೀಡಿದರು.
ಹೊಂಡವನ್ನು ಅಭಿವೃದ್ಧಿಗೊಳಿಸಲು ಪುರಸಭೆ ವತಿಯಿಂದ ₹ 45 ಲಕ್ಷ ಹಣ ಒದಗಿಸಲಾಗಿದೆ. ಆದರೆ, ಈ ಕಾರ್ಯಕ್ಕೆ ದೊಡ್ಡ ಮೊತ್ತದ ಅವಶ್ಯಕತೆಯಿದೆ. ಈ ಹೊಂಡ ತುಂಬಿದರೆ ಅಂತರ್ಜಲ ಅಭಿವೃದ್ಧಿಗೂ ಪೂರಕವಾಗಲಿದೆ. ಈ ಕುರಿತು ಚಿಂತನೆ ನಡೆಸಿ ಶಾಸಕರ ಅಭಿವೃದ್ಧಿ ನಿಧಿ ಮತ್ತು ಸರ್ಕಾರದಿಂದ ಸಿಗಬಹುದಾದ ಮೊತ್ತವನ್ನು ಒದಗಿಸಿಕೊಡಲು ತಮ್ಮ ಇತಿಮಿತಿಯಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದರು.
ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ‘ಮದಗದ ಕೆರೆಯಿಂದ ಇಲ್ಲಿಗೆ ನೀರು ತರಲು ಸುಲಭವಿಲ್ಲ. ಹಾಗಾಗಿ, ಎಲ್ಲಿಂದ ನೀರು ತರಬಹುದೆಂಬುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಯಾರಿಗೂ ತೊಂದರೆಯಾಗದಂತೆ ಹೊಂಡವನ್ನು ಪುನರುಜ್ಜೀವನಗೊಳಿಸಲು ಚಿಂತನೆ ನಡೆಸಲಾಗಿದೆ. 12ನೇ ಹಣಕಾಸು ಯೋಜನೆಯಡಿ ಈ ಕಾಮಗಾರಿಗೆ ಹಣ ಒದಗಿಸಲಾಗಿದೆ. ಒಟ್ಟಾರೆಯಾಗಿ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವದ ಈ ಹೊಂಡದ ಅಭಿವೃದ್ಧಿ ನಮ್ಮ ಗುರಿಯಾಗಿದೆ’ ಎಂದರು.