ಚಿಕ್ಕಮಗಳೂರು: ಮೆಸ್ಕಾಂ ಇಎಚ್ಟಿ ಮತ್ತು ಎಚ್ಟಿ ಗ್ರಾಹಕರು ವಿಶೇಷ ರಿಯಾಯಿತಿ ಯೋಜನೆ(ಎಸ್ಐಎಸ್) ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ಹೇಳಿದರು.
ಮೆಸ್ಕಾಂ ವತಿಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಇಎಚ್ಟಿ ಮತ್ತು ಎಚ್ಟಿ ಗ್ರಾಹಕರ ಸಭೆಯಲ್ಲಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳು ಮೆಸ್ಕಾಂ ಮೆಸ್ಕಾಂ ವ್ಯಾಪ್ತಿಯಲ್ಲಿವೆ. ಈ ನಾಲ್ಕು ಜಿಲ್ಲೆಗಳಿಂದ ಒಟ್ಟು 62 ಲಕ್ಷ ಸಂಪರ್ಕಗಳನ್ನು ಮೆಸ್ಕಾಂ ನೀಡಿದೆ. ಅದರಲ್ಲಿ ಇಎಚ್ಟಿ ಮತ್ತು ಎಚ್ಟಿ ಗ್ರಾಹಕರು 17 ಮಿಲಿಯನ್ ಯೂನಿಟ್ ವಿದ್ಯುತ್ ಬಳಸುತ್ತಿದ್ದಾರೆ ಎಂದರು.
ಬೆಳಿಗ್ಗೆ 6ರಿಂದ 10ಗಂಟೆವರೆಗೆ, ಸಂಜೆ 6ರಿಂದ ರಾತ್ರಿ 10 ಗಂಟೆವರೆಗೆ ವಿದ್ಯುತ್ ಬಳಕೆ ಬಾಹುಳ್ಯ ಅವಧಿ(ಪೀಕ್ ವರ್ಸ್)ಯಾಗಿರುತ್ತದೆ. ಈ ಸಮಯದಲ್ಲಿ ವಿದ್ಯುತ್ ಅತಿಯಾದ ಬೇಡಿಕೆ ನಿಯಂತ್ರಿಸುವ ನಿಮಿತ್ತ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್ಸಿ) ಇಎಚ್ಟಿ ಮತ್ತು ಎಚ್ಟಿ ಗ್ರಾಹಕರಿಗಾಗಿ ಎಸ್ಐಎಸ್ ಯೋಜನೆ ಜಾರಿಗೊಳಿಸಿದೆ ಎಂದರು.
ಇಎಚ್ಟಿ ಮತ್ತು ಎಚ್ಟಿ ಗ್ರಾಹಕರು ಬಾವುಳ್ಯ ಅವಧಿಯಲ್ಲಿ ವಿದ್ಯುತ್ ಬಳಸದೇ, ಬೆಳಿಗ್ಗೆ 10ಗಂಟೆಯಿಂದ ಸಂಜೆ 6ರವೆಗೆ ವಿದ್ಯುತ್ ಬಳಸಿದರೆ ಪ್ರತಿ ಯೂನಿಟ್ಗೆ ₹1 ಮತ್ತು ರಾತ್ರಿ 10ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ವಿದ್ಯುತ್ ಬಳಸಿದರೆ ಪ್ರತಿ ಯೂನಿಟ್ಗೆ ₹2ರಂತೆ ರಿಯಾಯಿತಿ ನೀಡಲಾಗುತ್ತದೆ. ಅದರಿಂದ ಗ್ರಾಹಕರಿಗೆ ವಿದ್ಯುತ್ ಬಿಲ್ ಮೇಲೆ ವಾರ್ಷಿಕ ಶೇ7ರಷ್ಟು ರಿಯಾಯಿತಿ ದೊರೆಯಲಿದೆ ಎಂದರು.
ಮೆಸ್ಕಾಂ ತಾಂತ್ರಿಕ ನಿರ್ದೇಶಕ ರಘುಪ್ರಕಾಶ್ ಮಾತನಾಡಿ, 2019–20ನೇ ಸಾಲಿನಲ್ಲಿ ಎಚ್ಟಿ ಸಂಪರ್ಕ ನೀಡುವಂತೆ 4 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 152ಕ್ಕೆ ಸಂಪರ್ಕ ಒದಗಿಸಲಾಗಿದೆ. ಎಲ್ಲ ಅರ್ಜಿ ವಿಲೇವಾರಿ ಮಾಡಿದರೆ, 281 ಮಿಲಿಯನ್ ಯೂನಿಟ್ ವಿದ್ಯುತ್ ಪೂರೈಸಬೇಕಾಗುತ್ತದೆ ಎಂದರು.
ಇಎಚ್ಟಿ ಮತ್ತು ಎಚ್ಟಿ ಗ್ರಾಹಕರಿಗೆ ಪ್ರತಿತಿಂಗಳ 1ನೇ ತಾರಿಕಿಗೆ ವಿದ್ಯುತ್ ಬಿಲ್ ಸಾಫ್ಟ್ ಪ್ರತಿಯನ್ನು ಇ–ಮೇಲ್ ಮೂಲಕ ಕಳುಹಿಸಬೇಕು. ಎರಡು ಮೂರು ದಿನಗಳಲ್ಲಿ ಮುದ್ರಿತ ಪ್ರತಿ ತಲುಪುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.
ಮೆಸ್ಕಾಂ ಮುಖ್ಯ ಎಂಜಿನಿಯರ್ಗಳಾದ ಆನಂದ್ ನಾಯ್ಕ, ಕೊಟ್ರೇಶ್, ಆರ್ಥಿಕ ಅಧಿಕಾರಿ ಶ್ರೀನಿವಾಸ್, ಎಂಜಿನಿಯರ್ ಎಂ.ಕೆ.ಶರಣಪ್ಪ, ವಾಣಿಜ್ಯ ಅಧಿಕಾರಿ ನಾಗರಾಜ್, ಎಇಇಗಳಾದ ವಿಜಯಕುಮಾರ್, ಕಾರ್ತಿಕ್ ಇದ್ದರು.
ವ್ಯಕ್ತವಾದ ಒತ್ತಾಯ, ದೂರುಗಳು
* ಅಂಬಳೆ ಕೈಗಾರಿಕಾ ವಸಾಹತುವಿಗೆ ವಿದ್ಯುತ್ ಮೊಬೈಲ್ ಸ್ಕ್ವಾಡ್ ನಿಯೋಜಿಸಬೇಕು
* ಲಕ್ಯಾ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚು ವಿದ್ಯುತ್ ನಿಲುಗಡೆ ಮಾಡಬಾರದು
* ಕಳಸಭಾಗದಲ್ಲಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಹೆಚ್ಚು ವಿದ್ಯುತ್ ನಿಲುಗಡೆ
* ಕುದುರೆಮುಖ ಕೃಷ್ಣರಾಜೇಂದ್ರ ಗಿರಿಧಾಮದಲ್ಲಿ ವೋಲ್ಟೇಜ್ ನಿರಂತರ ವ್ಯತ್ಯಯ
* ವಿದ್ಯುತ್ ಸೇವಾ ಶುಲ್ಕ ಕಡಿತಗೊಳಿಸಲು ಒತ್ತಾಯ
* ವಿದ್ಯುತ್ ಕೊರತೆಯಿಂದಾಗಿ ಕೈಗಾರಿಕೆಗಳಲ್ಲಿ ಜನರೇಟರ್ ಹೆಚ್ಚು ಬಳಕೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.