ನರಸಿಂಹರಾಜಪುರ: ನೈರುತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಗಳಾದ ಡಾ. ಧನಂಜಯ ಸರ್ಜಿ ಹಾಗೂ ಎಸ್.ಎಲ್. ಭೋಜೇಗೌಡ ಅವರನ್ನು ಗೆಲ್ಲಿಸಬೇಕೆಂದು ಧನಂಜಯ ಸರ್ಜಿ ಸಹೋದರ ಹರ್ಷ ಸರ್ಜಿ ಮನವಿ ಮಾಡಿದರು.
ಪಟ್ಟಣದಲ್ಲಿ ಬುಧವಾರ ಮೈತ್ರಿಕೂಟದ ಅಭ್ಯರ್ಥಿಗಳ ಪರ ಮತಯಾಚಿಸಿ ಅವರು ಮಾತನಾಡಿದರು.
ಪದವೀಧರರು ದೇಶವನ್ನು ಕಟ್ಟುವಲ್ಲಿ ನಿರಂತರವಾಗಿ ತೊಡಗಿಕೊಂಡವರು. ಇಂತಹ ಪದವೀಧರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಧನಂಜಯ ಸರ್ಜಿ ಅವರಿಗೆ ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವ ಸಾಮರ್ಥ್ಯ ಇದೆ. ಭೋಜೇಗೌಡ ಅವರು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಹೊಂದಿದ್ದು, ಇಬ್ಬರೂ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದರು.
ಬಿಜೆಪಿ ಮುಖಂಡರಾದ ಹೊಸೂರು ಸುರೇಶ್, ಚಂದ್ರಶೇಖರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ, ಎನ್.ಎಂ. ಕಾಂತರಾಜ್, ಬಿ.ಎಸ್.ಆಶೀಶ್ ಕುಮಾರ್, ವೈ.ಎಸ್.ರವಿ, ಎಸ್.ಎಸ್.ಸಂತೋಷ್ ಕುಮಾರ್, ಭದ್ರೇಗೌಡ, ಮಂಜುನಾಥ್ ಲಾಡ್ ಇದ್ದರು.