ಅಜ್ಜಂಪುರ: ‘ಭದ್ರಾ ಮೇಲ್ದಂಡೆ ಯೋಜ ನೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಗಿದೆ’ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ಪಟ್ಟಣ ಸಮೀಪ ಹೆಬ್ಬೂರು ಭಾಗದಲ್ಲಿ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ
ಯನ್ನು ಮಂಗಳವಾರ ವೀಕ್ಷಿಸಿದ ಬಳಿಕ ಮಾತನಾಡಿದರು. ‘ಸಚಿವ ನಾದ ಕೂಡಲೇ ಅಧಿವೇಶನ ಆರಂಭವಾಯಿತು. ಬಳಿಕ ಕೋವಿಡ್-19ನಿಂದಾಗಿ ಲಾಕ್ಡೌನ್ ಆಯಿತು. ಇತ್ತೀಚೆಗೆ ಭದ್ರಾ ಮೇಲ್ದಂಡೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳ ಕಾಮಗಾರಿ ಸ್ಥಳಕ್ಕೆ ಭೇ ಟಿ ನೀಡಿ, ವೀಕ್ಷಿಸುತ್ತಿದ್ದೇನೆ. ನಿಧಾನಗತಿಯ ಕಾಮಗಾರಿಗಳನ್ನು ಚುರುಕುಗೊಳಿಸಲು ಸೂಚಿಸಿದ್ದೇನೆ’ ಎಂದರು.
ಲಾಕ್ಡೌನ್ನಿಂದ ಉಂಟಾದ ಆರ್ಥಿಕ ಹಿಂಜರಿತವು ಪ್ರಗತಿಯಲ್ಲಿರುವ ನೀರಾವರಿ ಯೋಜನೆಯ ಮೇಲೆ ಪ್ರತಿಕೂಲ ಪ್ರಭಾವ ಬೀರದು. ಯೋಜನೆಗೆ ಆರ್ಥಿಕ ಕೊರತೆ ಆಗದು ಎಂಬ ನಂಬಿಕೆ ಇದೆ. ಮುಖ್ಯಮಂತ್ರಿ ನೀರಾವರಿ ಯೋಜನೆಗಳ ಪರವಾಗಿದ್ದಾರೆ. ಅಗತ್ಯವಿದ್ದರೆ ಕೇಂದ್ರ ಸಚಿವರನ್ನೂ ಭೇಟಿಯಾಗಿ ಅನುದಾನ ತರಲಾಗುವುದು’ ಎಂದರು.
‘ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅವ್ಯವಹಾರ ಅಥವಾ ಕಾಮಗಾರಿ ಕಳಪೆ ಆಗಿರುವ ಬಗ್ಗೆ ಮಾಹಿತಿ ಇಲ್ಲ. ಹಾಗೇನಾದರೂ ಲಿಖಿತ ದೂರು ಬಂದರೆ ತನಿಖೆಗೆ ಆದೇಶಿಸಲಾಗುವುದು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಭದ್ರಾ ಮೇಲ್ದಂಡೆ ಯೋಜನೆಯು ಮಳೆಗಾಲದಲ್ಲಿ ನೀರು ಒಯ್ಯುವ ಯೋಜನೆಯಾಗಿದೆ. ಮಳೆಗಾಲದಲ್ಲಿ ನೀರು ಕೊಂಡೊಯ್ಯುವುದರಿಂದ ಸ್ಥಳೀಯ ರೈತರಿಗೆ ತೊಂದರೆ ಆಗದು. ಇದನ್ನು ರೈತರು ಅರ್ಥಮಾಡಿ ಕೊಳ್ಳಬೇಕು. ಭೂಸ್ವಾಧೀನ ಸೇರಿದಂತೆ ಇತರ ವಿಚಾರದಲ್ಲಿ ಸರ್ಕಾರದ ಯೋಜನೆಗೆ ಅಡ್ಡಗಾಲು ಹಾಕಬಾರದು’ ಎಂದು ಮನವಿ ಮಾಡಿದರು.
‘ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಹೆಚ್ಚುವರಿ ಭೂಮಿ ಬಳಸಿಕೊಳ್ಳಲಾಗಿದೆ. ಕಾಮಗಾರಿ ನಡೆಸಲು ಅಗೆದ ಮಣ್ಣನ್ನು ಕೃಷಿ ಭೂಮಿ ಯಲ್ಲಿ ಸಂಗ್ರಹಿಸಲಾಗಿದೆ. ಇದರಿಂದ ಬೆಳೆ ಮಾಡಲಾಗುತ್ತಿಲ್ಲ. ಪರಿಹಾರ ಕೊಡಿಸಿ’ ಎಂದು ಹೆಬ್ಬೂರು ಗ್ರಾಮದ ರೈತ ಹಾಲಸಿದ್ದಪ್ಪ ಒತ್ತಾಯಿಸಿದರು.
‘ಭದ್ರಾ ಮೇಲ್ದಂಡೆಯಿಂದ ಸಂತ್ರಸ್ತಗೊಂಡ ತಾಲ್ಲೂಕಿಗೆ ಮಂಜೂರಾದ ಹನಿನೀರಾವರಿ ಯೋಜನೆ ಕುಂಟುತ್ತಾ ಸಾಗಿದೆ. ನಾಲ್ಕು ವರ್ಷವಾದರೂ ಪೂರ್ಣಗೊಂಡಿಲ್ಲ. ಯೋಜನೆಗಾಗಿ ಪೈಪ್ ಊಳಲು ತೆಗೆದಿರುವ ಗುಂಡಿ ಮುಚ್ಚಿಲ್ಲ. ಇದು, ಕೃಷಿ ಚಟುವಟಿಕೆ ನಡೆಸಲು ಅಡ್ಡಿಯಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳಿ’ ಎಂದು ರೈತ ಮಲ್ಲೇಶಪ್ಪ ಆಗ್ರಹಿಸಿದರು.
ಕಾಮಗಾರಿ ವೀಕ್ಷಣೆಗೆ ಪಟ್ಟು: ಆಕ್ರೋಶ
‘ಅಜ್ಜಂಪುರ ಪಟ್ಟಣ ಸಮೀಪ ಹೆಬ್ಬೂರು ಬಳಿ ನಡೆಯುತ್ತಿರುವ ರೈಲ್ವೆ ಕೆಳಸೇತುವೆ ಮತ್ತು ರಸ್ತೆ ಕಾಮಗಾರಿ ಕಳಪೆ ಆಗಿದೆ. ಇದನ್ನು ಸಚಿವ ರಮೇಶ್ ಜಾರಕಿಹೊಳಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಬೇಕು’ ಎಂದು ಹೆಬ್ಬೂರು ಗ್ರಾಮಸ್ಥರು ಪಟ್ಟುಹಿಡಿದರು.
ಹೆಬ್ಬೂರು ಗ್ರಾಮದ ಬಳಿಯ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವೀಕ್ಷಿಸಿ, ಹಿಂತಿರುಗುತ್ತಿದ್ದ ಸಚಿವರ ಕಾರನ್ನು ಅಡ್ಡಗಟ್ಟಿದ ರೈತರು, ‘ರೈಲ್ವೆ ಕೆಳಸೇತುವೆ ಕಾಮಗಾರಿ ಆಮೆಗತಿ ಯಲ್ಲಿ ಸಾಗುತ್ತಿದೆ. ಹೊಲ-ತೋಟ ಹಾಗೂ ಅಕ್ಕಪಕ್ಕದ ಗ್ರಾಮಗಳಿಗೂ ಸಂಚ
ರಿಸಲಾಗುತ್ತಿಲ್ಲ. ತಾವು ಸ್ಥಳ ಪರಿಶೀಲಿ ಸಬೇಕು’ ಎಂದು ಒತ್ತಾಯಿಸಿದರು.
‘ಈ ಬಗ್ಗೆ ಕ್ಷೇತ್ರದ ಸಂಸದರು, ರೈಲ್ವೆ ಸಚಿವರಿಗೆ ಮಾಹಿತಿ ನೀಡು ತ್ತೇನೆ. ತ್ವರಿತಗತಿಯಲ್ಲಿ ಹಾಗೂ ಗುಣಮಟ್ಟದ ಕಾಮಗಾರಿ ನಡೆಸಲು ಅಗತ್ಯ ಕ್ರಮಕೈಗೊಳ್ಳುವಂತೆ ಮನವಿ ಮಾಡುತ್ತೇನೆ’ ಎಂದು ಸಚಿವರು ರೈತರನ್ನು ಸಮಾಧಾನಪಡಿಸಲು ಯತ್ನಿಸಿದರು.
ಸಚಿವರು ರೈಲ್ವೆ ಕಾಮಗಾರಿಯನ್ನು ವೀಕ್ಷಿಸದೇ ಹಿಂತಿರುಗಿದ್ದು. ರೈತರ ಆಕ್ರೋಶಕ್ಕೆ ಕಾರಣವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.