ಪುರಂದರ ದಾಸರ ಹೆಸರು ಅಜರಾಮರ

ಕಡೂರು: ದಾಸ ಸಾಹಿತ್ಯದಲ್ಲಿ ಪುರಂದರದಾಸರ ಹೆಸರು ಅಜರಾಮರ ಎಂದು ಸಾಹಿತಿ ಎಚ್.ಎಸ್.ಸತ್ಯನಾರಾಯಣ ತಿಳಿಸಿದರು.
ತಾಲ್ಲೂಕಿನ ಪಂಚನಹಳ್ಳಿಯ ಸ್ನೇಹ ವಿದ್ಯಾಸಂಸ್ಥೆ ಬುಧವಾರ ಏರ್ಪಡಿಸಿದ್ದ ನುಡಿ ನಿತ್ಯೋತ್ಸವದ ಸಮಾರೋಪವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುರಂದರದಾಸರು ಕರ್ನಾಟಕ ಸಂಗೀತ ಕ್ಷೇತ್ರದ ಪಿತಾಮಹ ಎಂದೇ ಖ್ಯಾತರಾಗಿದ್ದಾರೆ. ಜೀವನದ ಕಾರ್ಪಣ್ಯಗಳು, ದೈವದ ಒಲುಮೆಯ ಫಲಗಳನ್ನು ತಮ್ಮ ಸಾವಿರಾರು ರಚನೆಗಳಲ್ಲಿ ತಿಳಿಸಿದರು. ತಮ್ಮ ಸಮಕಾಲೀನ ಕನಕದಾಸರೊಂದಿಗೆ ಬೆರೆತು ದಾಸ ಸಾಹಿತ್ಯವನ್ನು ಅತೀ ಎತ್ತರಕ್ಕೆ ಕೊಂಡೊಯ್ದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಸ್ನೇಹ ಸಂಸ್ಥೆಯ ಕಾರ್ಯ ಶ್ಲಾಘನೀಯ. ನಟ ಸಂಚಾರಿ ವಿಜಯ್ ಅವರ ಸ್ಮರಣೆಯಲ್ಲಿ ದತ್ತಿ ನಿಧಿ ಸ್ಥಾಪಿಸುವ ಚಿಂತನೆಯಿದೆ ಎಂದರು.
ಪತ್ರಕರ್ತ ಎಂ.ಎನ್.ಜಗದೀಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ನಮ್ಮ ನೆಲದ ಹಿರಿಮೆಯ ಪರಿಚಯವೂ ಆಗಬೇಕು’ ಎಂದರು.
ಸ್ನೇಹ ಸಂಸ್ಥೆಯ ಕಾರ್ಯದರ್ಶಿ ಸಿ.ಕೆ. ರಾಘವೇಂದ್ರ ಮಾತನಾಡಿ, ಸಂಸ್ಥೆಯ ಮೂಲಕ ಪ್ರತಿ ವರ್ಷ ಒಂದು ತಿಂಗಳಿಡೀ ಕಾರ್ಯಕ್ರಮ ನಡೆಸಲಾಗುತ್ತದೆ. ಈ ವರ್ಷ ಪುರಂದರ ದಾಸ ಸ್ಮರಣೆಯಲ್ಲಿ ಕಾರ್ಯಕ್ರಮಗಳು ನಡೆದಿವೆ’ ಎಂದರು.
ಸ್ನೇಹ ಶಾಲೆಯ ವಿದ್ಯಾರ್ಥಿಗಳು ಸಂಚಾರಿ ವಿಜಯ್ ಸ್ಮರಣಾರ್ಥ ನ್ಯಾಯಕ್ಕೆ ಜಯ ಎಂಬ ನಾಟಕ ಅಭಿನಯಿಸಿದರು. ಪಂಚನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರೇಖಾ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಮುಖ್ಯ ಶಿಕ್ಷಕ ಟಿ.ಬಿ.ಪ್ರಸನ್ನ, ಕೆ.ಲೋಕೇಶ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.