ಮೂಡಿಗೆರೆ: ತಾಲ್ಲೂಕಿನಾದ್ಯಂತ ಶನಿವಾರ ಉತ್ತಮ ಮಳೆಯಾಯಿತು. ಮಧ್ಯಾಹ್ನ 12ರಿಂದ ಆರಂಭವಾದ ಮಳೆ ಸಂಜೆಯವರೆಗೂ ಧಾರಾಕಾರವಾಗಿ ಸುರಿಯಿತು.
ಶನಿವಾರ ಸುರಿದ ಮಳೆಗೆ ಹೇಮಾವತಿ, ಜಪಾವತಿ, ಚಿಕ್ಕಳ್ಳ, ದೊಡ್ಡಳ್ಳ, ಹುಳುಗಿಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿತ್ತು. ತಾಲ್ಲೂಕಿನಾದ್ಯಂತ ಮಳೆಯಾಗುತ್ತಿರುವುದರಿಂದ ಎಲ್ಲೆಡೆ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.
ಕೊಟ್ಟಿಗೆಹಾರ ಸುತ್ತಮುತ್ತ ಮಳೆ: ಕೊಟ್ಟಿಗೆಹಾರ, ಬಣಕಲ್, ಬಾಳೂರು ಸುತ್ತಮುತ್ತ ಶುಕ್ರವಾರ ತಡರಾತ್ರಿಯಿಂದ ಬೆಳಿಗ್ಗೆವರೆಗೂ ಉತ್ತಮ ಮಳೆಯಾಗಿದೆ.
ರೈತರು ಗದ್ದೆಯಲ್ಲಿ ಉಳುಮೆ ಮಾಡಲು ಆರಂಭಿಸಿದ್ದು, ಇನ್ನೂ ಕೆಲವೆಡೆ ಭತ್ತದ ಸಸಿಮಡಿ ಹಾಕಲು ತಯಾರಿ ನಡೆಸಿದ್ದಾರೆ. ಕಾಫಿ ತೋಟಗಳಿಗೆ ಗೊಬ್ಬರ ಹಾಕುವ ದೃಶ್ಯ ಅಲ್ಲಲ್ಲಿ ಕಂಡುಬಂತು. ಕೊಟ್ಟಿಗೆಹಾರ ಭಾಗದಲ್ಲಿ ಶನಿವಾರ ಒಂದೂವರೆ ಇಂಚಿಗೂ ಅಧಿಕ ಮಳೆಯಾಗಿದೆ. ಚಾರ್ಮಾಡಿ ಘಾಟ್ನಲ್ಲಿ ಮಂಜು ಕವಿದ ವಾತಾವರಣವಿದ್ದು ಉತ್ತಮ ಮಳೆಯಾಗುತ್ತಿದೆ.