ಚಿಕ್ಕಮಗಳೂರು: 14 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಸತೀಶ (20) ಎಂಬಾತಗೆ 20 ವರ್ಷ ಜೈಲು, ₹ 50 ಸಾವಿರ ದಂಡವನ್ನು ನಗರದ ಎಫ್ಟಿಎಸ್ಸಿ–1(ಪೊಕ್ಸೊ) ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ವಿಧಿಸಿದೆ.
ನ್ಯಾಯಾಧೀಶರಾದ ವಿನುತಾ ಪಿ.ಶೆಟ್ಟಿ ಅವರು ಈ ಆದೇಶ ನೀಡಿದ್ದಾರೆ. ಬಾಲಕಿಗೆ ₹ 1.60 ಲಕ್ಷ ಪರಿಹಾರ ಧನ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಏನಿದು ಪ್ರಕರಣ: 2020ರ ಮೇ 15ರಂದು ಪ್ರಕರಣ ನಡೆದಿತ್ತು. ಸತೀಶ ಬೆಂಗಳೂರಿನ ಡಾಬಸ್ಪೇಟೆಯ ಹೋಟೆಲ್ವೊಂದರಲ್ಲಿ ಸಪ್ಲೈಯರ್ ಆಗಿದ್ದ.
ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಜಾವಳಿ ಗ್ರಾಮದ ಪುರದಮಕ್ಕಿಯ ಈತ ಬಾಲಕಿ ಮತ್ತು ಆಕೆಯ ಗೆಳತಿಗೆ ಫೋನ್ ಮಾಡಿ ಶಾಲೆ ಬಳಿಗೆ ಬನ್ನಿ ಮಾತನಾಡಬೇಕು ಎಂದು ಪುಸಲಾಯಿಸಿದ್ದ.
ಇಬ್ಬರೂ ಶಾಲೆ ಬಳಿ ಬಂದಾಗ ತಿನಿಸು, ಪಾನೀಯ ಕೊಟ್ಟು, ಅವರೊಂದಿಗೆ ತಾನೂ ಸೇವಿಸಿದ್ದ. ಶಾಲೆಯ ವರಾಂಡದಲ್ಲಿ ಬಾಲಕಿಯನ್ನು ಅತ್ಯಾಚಾರ ಎಸಗಿದ್ದ. ವಿಷಯ ಬಾಯಿಬಿಟ್ಟರೆ ಕೊಲೆ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದ.
ಬಾಳೂರು ಪೊಲೀಸ್ ಠಾಣೆಯಲ್ಲಿ ಮೇ 16ರಂದು ಬಾಲಕಿಯ ತಾಯಿ ದೂರು ದಾಖಲಿಸಿದ್ದರು.
ಮೂಡಿಗೆರೆ ಇನ್ಸ್ಪೆಕ್ಟರ್ ಎಚ್.ಎಂ.ಜಗನ್ನಾಥ್ ಅವರು ಕೋರ್ಟ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪೋಕ್ಸೊ ಕೋರ್ಟ್ ವಿಶೇಷ ಪಬ್ಲಿಕ್ ಪ್ರಾಸಿಕ್ಯುಟರ್ ಬಿ.ಎಚ್. ಶ್ರೀಹರ್ಷ ವಾದ ಮಂಡಿಸಿದ್ದರು.