ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೌಹಾರ್ದ ಪ್ರತಿಯೊಬ್ಬರಲ್ಲೂ ಇರಬೇಕಾದ ಶ್ರೇಷ್ಠ ಸಂಗತಿ’

Last Updated 30 ಮೇ 2022, 4:34 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಮತ್ತೊಬ್ಬರ ಸ್ಥಾನದಲ್ಲಿ ನಿಂತು ಅವರಿಗಾಗುವ ಅನುಭವವನ್ನು ಸಂವೇದಿಸುವ ಹೃದಯವಂತಿಕೆಯನ್ನು ಬೆಳೆಸಿಕೊಂಡರೆ ಜಗತ್ತಿನಲ್ಲಿ ಸೌಹಾರ್ದ ನಿಜವಾದ ಅರ್ಥದಲ್ಲಿ ಅನುಷ್ಠಾನವಾಗುತ್ತದೆ. ಶಾಂತಿ– ಸಮೃದ್ಧಿ ನೆಲೆಸಲು ಸಾಧ್ಯವಾಗುತ್ತದೆ’ ಎಂದು ಬಸವಮಂದಿರದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.

ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಎಂಎಲ್‌ವಿ ರೋಟರಿ ಸಭಾಂಗಣ ಭಾನುವಾರ ಏರ್ಪಡಿಸಿದ್ದ ಈದ್‌ ಸೌಹಾರ್ದ ಕೂಟದಲ್ಲಿ ಮಾತನಾಡಿದರು. ‘ಸೌಹಾರ್ದವು ಧರ್ಮಗಳ ನಡುವೆ ಇರಬೇಕಾದ ಸಂಗತಿ ಅಷ್ಟೇ ಅಲ್ಲ. ಅದು ಪ್ರತಿಯೊಬ್ಬ ಮನುಷ್ಯರಲ್ಲೂ ಇರಬೇಕಾದ ಶ್ರೇಷ್ಠ ಸಂಗತಿ ಎಂಬುದನ್ನು ಗಮನಿಸಬೇಕು. ಮತ್ತೊಬ್ಬರ ನೋವು–ನಲಿವುಗಳನ್ನು ಅವರ ಸ್ಥಾನದಲ್ಲಿ ನಿಂತು ಅರ್ಥೈಸಿಕೊಳ್ಳಬೇಕು. ಒಳಿತು ನಮ್ಮಿಂದಲೇ ಪ್ರಾರಂಭವಾಗಬೇಕು’ ಎಂದು ಕಿವಿಮಾತು ಹೇಳಿದರು.

‘ಬಾಂಧವ್ಯಗಳನ್ನು ಹೃದಯದಿಂದ ಕಾಪಾಡಿಕೊಳ್ಳಬೇಕು. ನಮ್ಮಿಂದಲೇ ಸೌಹಾರ್ದ ಆರಂಭಿಸಬೇಕು. ಸೌಹಾರ್ದ ಬೆಳೆಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಲು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

ಬಿಷಪ್‌ ಡಾ.ಟಿ.ಅಂತೋನಿ ಸ್ವಾಮಿ ಮಾತನಾಡಿ, ಎಲ್ಲ ಧರ್ಮಗಳು ಸಮಾನ ಎಂಬ ಭಾವ ಮೈಗೂಡಿಸಿಕೊಳ್ಳಬೇಕು. ಎಲ್ಲ ಧರ್ಮಗಳ ಸಾರ ಒಳಿತು. ಆ ಒಳಿತನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜಗತ್ತಿಗೆ ಶಾಂತಿ ಅಗತ್ಯವಾಗಿ ಬೇಕಾಗಿದೆ. ಎಲ್ಲರೂ ಸಹೋದರತ್ವದಿಂದ ಬಾಳುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

ಶಾಂತಿ ಪ್ರಕಾಶನದ ವ್ಯವಸ್ಥಾ‍ಪಕ ಕಾರ್ಯದರ್ಶಿ ಮೊಹಮ್ಮದ್ ಕುಂಞ ಮಾತನಾಡಿ, ಮನುಷ್ಯನ ಶ್ರೀಮಂತಿಕೆ ಎಂದರೆ ಮನಸ್ಸಿನ ಶ್ರೀಮಂತಿಕೆ. ಮನಸ್ಸು ಚೆನ್ನಾಗಿದ್ದರೆ ಮಾತ್ರ ಮನುಷ್ಯ ನೆಮ್ಮದಿಯಿಂದ ಬದುಕಲು ಸಾಧ್ಯ’ ಎಂದರು.

ರಿಜ್ವಾನ್‌ ಖಾಲಿದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT