ಕಳಸ: ಅರಣ್ಯ ಇಲಾಖೆಯು ತಾಲ್ಲೂಕು ವ್ಯಾಪ್ತಿಯ ವಿವಿಧೆಡೆ ಬುಧವಾರ ಡ್ರೋನ್ ಮೂಲಕ 10 ಸಾವಿರ ಬೀಜದ ಉಂಡೆಗಳನ್ನು ಬಿತ್ತನೆ ಮಾಡಿದೆ.
ಮಲ್ಲೇಶನಗುಡ್ಡ, ಚನ್ನಡಲು, ಇಡಕಿಣಿ, ಬಿಳಗಲಿ, ಬಲಿಗೆ, ತಲಗೋಡು, ದುರ್ಗದಹಳ್ಳಿ ಪ್ರದೇಶದಲ್ಲಿ ಕಾರ್ಯಾಚರಣೆ ಮಾಡ ಲಾಗಿದೆ. ಡ್ರೋನ್ ಬಳಸಿ ಬೀಜದ ಉಂಡೆಗಳನ್ನು ಭೂಕುಸಿತ ಸಂಭವಿಸಿದ್ದ ಸ್ಥಳಗಳು ಮತ್ತು ಇತರ ಪ್ರದೇಶದಲ್ಲಿ ಹಾಕಲಾಯಿತು.
ಬಿದಿರು, ಬೆತ್ತ, ಸಂಪಿಗೆ, ಹಲಸು, ನೇರಳೆ, ಸುರಹೊನ್ನೆ, ನಲ್ಲಿ, ಹೆಬ್ಬಲಸು ಮತ್ತಿತರ ಮರಗಳ ಬೀಜಗಳನ್ನು ಸಂಗ್ರಹಿಸಿ, ಬೀಜದ ಉಂಡೆಗಳನ್ನು ಮಾಡಲಾಗಿತ್ತು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚೇತನ್ ಗಸ್ತಿ ತಿಳಿಸಿದರು.
ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ನೀಲೇಶ್ ಶಿಂಧೆ, ಕಳಸ ವಲಯದ ಸಿಬ್ಬಂದಿ ಇದ್ದರು.
ಕೊಟ್ಟಿಗೆಹಾರದಲ್ಲಿ ಕಾರ್ಯಾಚರಣೆ
ಕೊಟ್ಟಿಗೆಹಾರ: ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟ್, ಮೇಗೂರು, ಮಲೆಮನೆ, ಮಧುಗುಂಡಿ ಭಾಗದಲ್ಲಿ ಅರಣ್ಯ ಇಲಾಖೆ ವತಿಯಿಂದ ಡ್ರೋನ್ ಮೂಲಕ ಬೀಜ ಬಿತ್ತನೆ (ಸೀಡ್ ಬಾಲ್) ಮಾಡಲಾಯಿತು.
ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟ್, ಮೇಗೂರು, ಮಲೆಮನೆ, ಮಧುಗುಂಡಿ ಭಾಗದಲ್ಲಿ ಅತಿವೃಷ್ಟಿಯಿಂದ ಹೆಚ್ಚು ಭೂ ಕುಸಿತವಾಗಿದ್ದು ಮಳೆಗಾಲದಲ್ಲಿ ಆ ಪ್ರದೇಶಗಳಲ್ಲಿ ಮತ್ತೆ ಮತ್ತೆ ಭೂ ಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಅರಣ್ಯ ಇಲಾಖೆ ವತಿಯಿಂದ ಇಂತಹ ಪ್ರದೇಶಗಳಲ್ಲಿ ಬೀಜದುಂಡೆ ಹಾಗೂ ಬೀಜಗಳನ್ನು ಬಿತ್ತನೆ ಮಾಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ಹೇಳಿದರು.
‘ಹೆಕ್ಟೇರ್ಗೆ 500 ಬೀಜಗಳಂತೆ, 10 ಸಾವಿರ ಬೀಜದ ಉಂಡೆ ಹಾಗೂ 17 ಸಾವಿರ ಬೀಜಗಳನ್ನು ಬಿತ್ತನೆ ಮಾಡಲಾಗಿದೆ. ಹಲಸು, ಮಾವು, ನೇರಳೆ, ನೆಲ್ಲಿ, ಬಿದಿರು ಮುಂತಾದ ಸಸ್ಯಗಳ ಬೀಜಗಳನ್ನು ಬಿತ್ತನೆ ಮಾಡಲಾಗಿದೆ’ ಎಂದರು.
ಉಪ ವಲಯ ಅರಣ್ಯಾಧಿಕಾರಿ ರಮೇಶ್, ಅರಣ್ಯ ರಕ್ಷಕ ಪರಮೇಶ್, ಚಾಲಕ ಸುಮಂತ್, ಅರಣ್ಯ ವೀಕ್ಷಕ ಸುಮಂತ್, ರಿತೇನ್ ಪಟೇಲ್ ಮತ್ತಿತರರು ಇದ್ದರು.