ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಗ್ರಾಮದ ಕಿರಣ್ (32) ಗುಂಡೇಟಿನಿಂದ ಬುಧವಾರ ಸಾವಿಗೀಡಾಗಿದ್ದಾರೆ. ಕಿರಣ್ ಅವರ ಅಪ್ಪ ಲಕ್ಷ್ಮಣ (72) ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಲಕ್ಷ್ಮಣ ಅವರನ್ನು ಬಂಧಿಸಲಾಗಿದೆ. ಮನೆಯಲ್ಲಿದ್ದ ಎಸ್ಬಿಎಲ್ ಬಂದೂಕಿನಿಂದ ಕೃತ್ಯ ಎಸಗಿರಬಹುದು ಎಂಬ ಶಂಕೆ ಇದೆ. ಕೌಟುಂಬಿಕ ಕಲಹದಿಂದ ಕೃತ್ಯ ಎಸಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಕಿರಣ್ ಮನೆಯೊಳಗೆ ರಾತ್ರಿ 8.30ರ ಸುಮಾರಿಗೆ ಗುಂಡಿನ ಸದ್ದು ಕೇಳಿಸಿದೆ. ತಕ್ಷಣವೇ ಅಕ್ಕಪಕ್ಕದ ಮನೆಯವರು ಹೋಗಿ ನೋಡಿದಾಗ ಅನಾಹುತ ಗೊತ್ತಾಗಿದೆ.
ಗೋಣಿಬೀಡು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.