ಶೃಂಗೇರಿ: ಇಲ್ಲಿನ ಪಟ್ಟಣ ಪಂಚಾಯಿತಿ ಎದುರು ಪೌರ ಕಾರ್ಮಿಕರ ಸಂಘ ಹಾಗೂ ಹೊರಗುತ್ತಿಗೆ ಸಂಘದ ವತಿಯಿಂದ ಶುಕ್ರವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಯಿತು.
ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ಕೆ.ಮಾತನಾಡಿ,‘ಶೃಂಗೇರಿ ಪಟ್ಟಣದಲ್ಲಿ 20ವರ್ಷಗಳಿಂದ ಪೌರ ಕಾರ್ಮಿಕರು, ಚಾಲಕರು, ನೀರು ಸರಬರಾಜು ಹಾಗೂ ಡಾಟಾ ಎಂಟ್ರಿ ಅಪರೇಟರ್ಗಳು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತಿದ್ದಾರೆ. ಈ ಪದ್ಧತಿ ರದ್ದುಪಡಿಸಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ನೀಡಬೇಕು’ ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ ಮುಖಂಡ ಕೆ.ಎಂ ಗೋಪಾಲ್, ನಿವೃತ್ತ ನೌಕರ ಸಂಘದ ಅಧ್ಯಕ್ಷ ವಿಜೇಂದ್ರ, ಪೌರಕಾರ್ಮಿಕ ಸಂಘದ ಅಧ್ಯಕ್ಷ ರಮೇಶ್, ಪೌರ ಕಾರ್ಮಿಕರಾದ ಲಕ್ಷ್ಮೀ, ಅಂಜಲಿ, ಸುಜಾತಾ, ಗೋಪಾಲ, ಕಚೇರಿ ಸಿಬ್ಬಂದಿ ಅನ್ನಪೂರ್ಣಾ, ಸುಪ್ರೀತಾ, ಗೀತಾ, ಅರ್ಚನಾ, ಮಂಜುನಾಥ ಹಾಗೂ ಮುಖ್ಯಾಧಿಕಾರಿ ಶ್ರೀಪಾದ ಇದ್ದರು.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಟಿ.ಡಿ ರಾಜೇಗೌಡ ಅವರು ಮನವಿ ಸ್ವೀಕರಿಸಿ, ‘ಪೌರಕಾರ್ಮಿಕರು ಪಟ್ಟಣದ ಸ್ವಚ್ಛತೆಯನ್ನು ನಿರಂತರ ಕಾಪಾಡುವ ಶ್ರಮಿಕರು. ಅವರ ಬೇಡಿಕೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸಿ ಕೂಡಲೇ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ’ ಎಂದರು.