ಶೃಂಗೇರಿ: ಶುಕ್ರವಾರ ಶೃಂಗೇರಿ ಶಾರದೆ ಬ್ರಾಹ್ಮಿ ಅಲಂಕಾರದಲ್ಲಿ ಕಂಗೊಳಿಸಿದಳು. ಶಾರದೆ ಕೈಯಲ್ಲಿ ಕಮಂಡಲು, ಪುಸ್ತಕ, ಪಾಶ ಮತ್ತು ಚಿನ್ಮುದ್ರೆ ಧರಿಸಿ ಹಂಸ ವಾಹನಾರೂಢಳಾಗಿ ಬ್ರಹ್ಮನ ಪಟ್ಟದ ರಾಣಿಯಾದ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ನೀಡಿದಳು.
ಶಾರದಾ ಮಠದ ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರಭಾರತೀ ಸ್ವಾಮೀಜಿ ಶಾರದೆಗೆ ವಿಶೇಷಪೂಜೆ ಸಲ್ಲಿಸಿದರು. ಮಠದ ಋತ್ವಿಜರಿಂದ ದೇವಿಭಾಗವತ, ದುರ್ಗಾಸಪ್ತಶತಿ, ಸೂತಸಂಹಿತೆ ಮುಂತಾದ ಪಾರಾಯಣಗಳು, ಸೂಕ್ತ ಜಪ, ದುರ್ಗಾಜಪಗಳು ನೆರವೇರಿದವು.
ಸರಳವಾಗಿ ನಡೆದ ದರ್ಬಾರು: ಗುರುವಾರ ರಾತ್ರಿ ಶಾರದೆಯ ಸನ್ನಿಧಿಯಲ್ಲಿ ಸರಳವಾಗಿ ದರ್ಬಾರು ಕಾರ್ಯಕ್ರಮ ನೆರವೇರಿತು. ಮಠದ ಅಧಿಕಾರಿಗಳು, ಪುರೋಹಿತರು ಇದ್ದರು.
ದೇವಾಲಯದ ಒಳ ಪ್ರಾಂಗಣದಲ್ಲಿ ಮೂರು ಸುತ್ತು ರಥೋತ್ಸವ ನೆರವೇರಿತು. ಬಳಿಕ ಸಿಂಹಾಸನದಲ್ಲಿ ಅಸೀನರಾದ ಮಠದ ಕಿರಿಯ ಗುರುಗಳಾದ ವಿಧುಶೇಖರ ಭಾರತಿ ಸ್ವಾಮೀಜಿ ಅವರ ಸಾನ್ನಿಧ್ಯ ದಲ್ಲಿ ಶಾರದಾಂಬೆಗೆ ಮಹಾಮಂಗಳಾರತಿ ಯಾದ ಬಳಿಕ ನಾಲ್ಕು ವೇದಗಳ ಪಾರಾಯಣ, ಪಂಚಾಂಗ ಶ್ರವಣ, ಸರ್ವವಾದ್ಯ ಸೇವೆ ನೆರವೇರಿತು.
ರಾಷ್ಟ್ರಪತಿ ರಾಮನಾಥ ಕೋವಿಂದ್ ಕುಟುಂಬ ಶಾರದಾ ಪೀಠಕ್ಕೆ ಭೇಟಿ ನೀಡುವ ಸಲುವಾಗಿ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕರಿಗೆ ದೇವಸ್ಥಾನದ ಒಳಗೆ ಪ್ರವೇಶಕ್ಕೆ ಅವಕಾಶ ಇರಲಿಲ್ಲ.