ಇಡಕಿಣಿ ಗ್ರಾಮದ ಬೇಟೆರಾಯನ ಹಳ್ಳದ ಬಲದಂಡೆಯಲ್ಲಿ ಹೊಸಮನೆ ಚಂದ್ರರಾಜಯ್ಯ ಹಾಗೂ ನಾಗೇಂದ್ರಯ್ಯ ಅವರ ಪಾಳುಗದ್ದೆಯಲ್ಲಿರುವ ಬಂಡೆಯ ಮೇಲೆ ಕಬ್ಬಿಣಯುಗದ ಬೃಹತ್ ಶಿಲಾಸಂಸ್ಕೃತಿಯ ಮಾನವರು ನಿರ್ಮಿಸಿದ ವೃತ್ತಾಕಾರ, ಅಂಡಾಕಾರದ 32 ಕಲ್ಗುಳಿಗಳು ಕಂಡು ಬಂದಿವೆ. ಶಿಲಾಯುಧಗಳನ್ನು ಹರಿತಗೊಳಿಸುವ ಸಮಯದಲ್ಲಿ ರಚನೆಯಾಗಿರಬಹುದು. ಧಾರ್ಮಿಕ ಕಾರ್ಯಕ್ರಮ, ಪಿತೃಗಳ ಪೂಜೆ ಸಮಯದಲ್ಲಿ ದೀಪ ಹಚ್ಚಲು, ಆಹಾರ ತಯಾರಿಕೆ, ಔಷಧಿ ತಯಾರಿಕೆ, ಬಣ್ಣಗಳ ತಯಾರಿಕೆಗಾಗಿಯೂ ಬಳಕೆಯಾಗುತ್ತಿದ್ದ ಸಾಧ್ಯತೆಗಳಿವೆ. ಸ್ಥಳೀಯರು ಈ ಕಲ್ಗುಳಿಗಳ ಬಂಡೆಯನ್ನು ಚನ್ನೇಕಲ್ಲು ಎಂದು ಕರೆಯುತ್ತಿದ್ದು, ಸ್ಥಳೀಯ ಚನ್ನೆಮಣೆ (ಅಳಗುಳಿಮಣೆ) ಆಗಿರಬಹುದು ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.