ಮಲ್ಲಂದೂರು ರಸ್ತೆ ನಿತ್ಯ ಜನಸಂದಣಿ ಮತ್ತು ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಬುಧವಾರದಂದು ಸಂತೆ ನಡೆಯುವುದರಿಂದ ದಟ್ಟಣೆ ಪ್ರಮಾಣ ಇನ್ನೂ ಹೆಚ್ಚಾಗಿರುತ್ತದೆ. ಬಾರ್ ಲೇನ್ ರಸ್ತೆ ಕಿಷ್ಕಿಂದೆಯಂತಿದ್ದು, ಏಕಮುಖ ಸಂಚಾರ ವ್ಯವಸ್ಥೆ ಇದೆ. ಈ ಎರಡು ರಸ್ತೆಗಳು ಸಂಧಿಸುವ ಸ್ಥಳದಲ್ಲಿ ಚರಂಡಿ ಸ್ವಚ್ಛಗೊಳಿಸಲು ಬಾರ್ಲೇನ್ ರಸ್ತೆಗೆ ಅಡ್ಡಲಾಗಿ ಅಗೆಯಲಾಗಿದ್ದು, ಮಣ್ಣನ್ನು ಮಲ್ಲಂದೂರು ರಸ್ತೆಗೆ ಹಾಕಲಾಗಿದೆ. ಅದರಿಂದ ಈ ಜಾಗದಲ್ಲಿ ದಿಣ್ಣೆಗಳು ಏರ್ಪಟ್ಟಿವೆ. ವಾಹನ ಚಲಾಯಿಸಲು ಚಾಲಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ಮಣ್ಣನ್ನು ಅಗೆದು ಚರಂಡಿ ಮೇಲಿನ ಹಾಸುಗಲ್ಲುಗಳನ್ನು ತೆಗೆಯಲಾಗಿದೆ. ಒಂದು ಬಾರಿ ಚರಂಡಿಯನ್ನು ಸ್ವಚ್ಛಗೊಳಿಸಲಾಗಿದೆ. ಚರಂಡಿಯಿಂದ ತೆಗೆದ ಕಸವನ್ನು ಪಕ್ಕದ ಮಣ್ಣಿನ ದಿಣ್ಣೆ ಮೇಲೆಯೇ ಹಾಕಲಾಗಿದೆ. ಆದರೆ ಚರಂಡಿಯಲ್ಲಿ ಕಸ, ಕೊಳಚೆ ನೀರು, ಪ್ಲಾಸ್ಟಿಕ್ ಮತ್ತೆ ತುಂಬಿಕೊಂಡಿದೆ. ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳ ಆವಾಸ ತಾಣವಾಗಿ ಮಾರ್ಪಟ್ಟಿದೆ.