ಚೌಳಹಿರಿಯೂರು(ಬೀರೂರು): ರಾಜಕಾರಣಕ್ಕೆ ಬಂಡವಾಳ ಶಾಹಿಗಳ ಆಗಮನವಾಗಿ ರಾಜಕೀಯ ಮೌಲ್ಯ ಕುಸಿತವಾಗಿದೆ ಎಂದು ಕಾಂಗ್ರೆಸ್ ವೀಕ್ಷಕ ಟಿ.ವಿ.ಶಿವಶಂಕರಪ್ಪ ವಿಷಾದ ವ್ಯಕ್ತಪಡಿಸಿದರು.
ಚೌಳಹಿರಿಯೂರಿನಲ್ಲಿ ಭಾನುವಾರ ನಡೆದ ಕಾಂಗ್ರೆಸ್ ನಡಿಗೆ ಜನರ ಬಳಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೊದಲು ಅಧಿಕಾರಿಗಳು ರಾಜಕಾರಣಿಗಳ ಮಾತಿಗೆ ಬೆಲೆ ನೀಡಿ ಜನಸಾಮಾನ್ಯರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸು ತ್ತಿದ್ದರು. ರಾಜಕೀಯ ಮೌಲ್ಯ ಕಾಪಾಡಿ ಸಾಮಾಜಿಕ ಕಳಕಳಿ ತೋರುತ್ತಿದ್ದರು.
ಆದರೆ ಇಂದು ರಾಜಕೀಯ ಮತ್ತು ಅಧಿಕಾರಶಾಹಿ ಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು ಎಲ್ಲದರ ಮೌಲ್ಯ ಕುಸಿತವಾಗಿದೆ. ಇದಕ್ಕೆ ರಾಜಕಾರಣಿಗಳ ದಾಹವೇ ಮೂಲ ಕಾರಣ ಎಂದು ಅವರು ಕಿಡಿಕಾರಿದರು.
ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಚ್.ಚಂದ್ರಪ್ಪ ಮಾತನಾಡಿ, ಭ್ರಷ್ಟಾಚಾರದಿಂದ ಉಂಟಾಗುವ ರಾಜಕೀಯ ಮತ್ತು ಸಾಮಾಜಿಕ ದುಷ್ಪರಿಣಾಮಗಳ ಕುರಿತು ಕಾಂಗ್ರೆಸ್ ಕಾರ್ಯಕರ್ತರು ಜನಸಾಮಾನ್ಯರಲ್ಲಿ ಅರಿವು ಮೂಡಿಸಿ ಬಿಜೆಪಿ ದುರಾಡಳಿತದ ವಿರುದ್ಧ ಜನಜಾಗೃತಿ ಮಾಡುವಲ್ಲಿ ನಿರತರಾಗುವಂತೆ ಕರೆ ನೀಡಿದರು.
ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ವಿನಾಯಕ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಾಜಕೀಯಕ್ಕೆ ಬಂದು ಭ್ರಷ್ಟಾಚಾರ ವಿರೋಧಿ ರಾಜಕಾರಣಕ್ಕೆ ಒತ್ತು ನೀಡಬೇಕು ಎಂದು ಕೋರಿದರು.
ಕಾರ್ಯಕ್ರಮದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಕಲ್ಲೇಶಪ್ಪ, ಚೌಳಹಿರಿಯೂರು ಗ್ರಾ.ಪಂ.ಅಧ್ಯಕ್ಷ ಕೃಷ್ಣಮೂರ್ತಿ,ಬಿಸಿಲೆರೆ ದೇವರಾಜ್, ಶಿವಣ್ಣ, ಲಾವಣ್ಯ, ಜಡೆಮಲ್ಲಪ್ಪ, ಸತ್ಯನಾರಾಯಣ, ಮಹೇಶ್, ಕಾಂತರಾಜ್ ಮುಂತಾದವರು ಪಾಲ್ಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.