ಚಿತ್ರದುರ್ಗ: ಬೆಂಬಲ ಬೆಲ ಯೋಜನೆಯಡಿ ಫೆ.20 ರಿಂದ ಎಫ್ಎಕ್ಯೂ ಗುಣಮಟ್ಟದ ಕಡಲೆಕಾಳು ಖರೀದಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಪ್ರತಿ ಕ್ವಿಂಟಾಲ್ಗೆ ₹ 5,335 ದರ ನಿಗದಿ ಮಾಡಲಾಗಿದ್ದು, ಜಿಲ್ಲೆಯ 13 ಸ್ಥಳಗಳಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ.
ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು. ಜಿ.ಆರ್.ಜೆ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕೇಂದ್ರ ಸರ್ಕಾರ 2023ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ 1.17 ಲಕ್ಷ ಮೆಟ್ರಿಕ್ ಟನ್ ಕಡಲೆ ಕಾಳು ಖರೀದಿಗೆ ಅನುಮತಿ ನೀಡಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಅಂದಾಜು 44,539 ಹೆಕ್ಟೇರ್ ಪ್ರದೇಶದಲ್ಲಿ ಕಡಲೆಕಾಳು ಬಿತ್ತನೆಯಾಗಿದ್ದು,
44,539 ಟನ್ ಕಡಲೆ ಉತ್ಪಾದನೆ ನಿರೀಕ್ಷೆಯಿದೆ.
ಫೆ.20ರಿಂದ ಮಾರ್ಚ್ 31ರ ವರೆಗೆ 45 ದಿನ ಕಡೆಲೆಕಾಳು ಮಾರಾಟದ ನೋಂದಣಿಗೆ ಅವಕಾಶವಿದೆ. ಫೆ.20ರಿಂದ ಮೇ 15ರವರಗೆ 90 ದಿನ ಕಡಲೆಕಾಳು ಖರೀದಿ ನಡೆಯಲಿದೆ. ಫ್ರೂಟ್ಸ್ ದತ್ತಾಂಶ ಮಾಹಿತಿ
ಹಾಗೂ ಆಧಾರ ಕಾರ್ಡ್ ಮಾಹಿತಿಯೊಂದಿಗೆ ಪ್ರತಿ ಎಕರೆಗೆ 4 ಕ್ವಿಂಟಾಲ್ನಂತೆ ಗರಿಷ್ಠ 15 ಕ್ವಿಂಟಾಲ್ ಮಾರಾಟಕ್ಕೆ ರೈತರು ನೋಂದಣಿ ಮಾಡಿಕೊಳ್ಳಬಹುದು.
‘ವಿಳಂಬವಾಗದ ರೀತಿಯಲ್ಲಿ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ನಡೆಯಬೇಕು. ಕಡಲೆಕಾಳನ್ನು ಚೀಲಗಳಲ್ಲಿ ತುಂಬಿ, ಯಂತ್ರದ ಸಹಾಯದಿಂದ ಹೊಲಿದು ಗೋದಾಮಿಗೆ ಸಾಗಿಸಬೇಕು. ಹಮಾಲಿ ಕೆಲಸಗಾರರಿಗೆ ಆಯಾ ದಿನದಂದೇ ಕೂಲಿ ನೀಡಬೇಕು. ಉಗ್ರಾಣದಲ್ಲಿ ದಾಸ್ತಾನು ಪಡೆದ ಕಡಲೆಕಾಳಿಗೆ ರಸೀದಿ ನೀಡಬೇಕು. ದುರುಪಯೋಗ ಹಾಗೂ ರೈತರಿಂದ ದೂರು ಬರದಂತೆ ಕಾರ್ಯನಿರ್ವಹಿಸಬೇಕು’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಸೂಚನೆ ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಪಿ. ರಮೇಶ್ಕುಮಾರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್, ಕೃಷಿ ಉತ್ಪನ್ನ ಮಾರುಕಟ್ಟೆ ಉಪನಿರ್ದೆಶಕ ಎಸ್.ಎನ್. ಪತ್ತಾರ್ ಅವರೂ ಸಭೆಯಲ್ಲಿ ಇದ್ದರು.
ಖರೀದಿ ಕೇಂದ್ರಗಳ ಮಾಹಿತಿ:
ಚಿತ್ರದುರ್ಗ ತಾಲ್ಲೂಕಿನಲ್ಲಿ ಚಿತ್ರದುರ್ಗ ಟೌನ್ ಸಹಕಾರ ಸಂಘ, ಮಾಡನಾಯಕನಹಳ್ಳಿ, ಚಿಕ್ಕಗೊಂಡನಹಳ್ಳಿ ಸಹಕಾರಿ ಸಂಘ ಹಾಗೂ ತುರವನೂರಿನ ಮಂಜುನಾಥಸ್ವಾಮಿ ರೈತ ಉತ್ಪಾದಕರ ಕಂಪೆನಿ. ಚಳ್ಳಕೆರೆ ತಾಲ್ಲೂಕಿನಲ್ಲಿ ರಾಮಜೋಗಿಹಳ್ಳಿ, ಚಿಕ್ಕಮಧುರೆ ಸಹಕಾರ ಸಂಘ, ಹಿರಿಯೂರು ತಾಲೂಕಿನಲ್ಲಿ ಟಿಎಪಿಸಿಎಂಸಿ, ಐಮಂಗಲ, ಬಬ್ಬೂರು, ಮರಡಿಹಳ್ಳಿ, ಸಹಕಾರ ಸಂಘ.
ಹೊಳಲ್ಕೆರೆ ತಾಲ್ಲೂಕಿನಲ್ಲಿ ರಾಮಗಿರಿ ಸಹಕಾರ ಸಂಘ, ಹೊಸದುರ್ಗ ತಾಲ್ಲೂಕಿನ ಹೊಸದುರ್ಗ ರೋಡ್ ಸಹಕಾರ ಸಂಘ, ಮೊಳಕಾಲ್ಮೂರಿನ ಟಿಎಪಿಸಿಎಂಸಿ ಸಹಕಾರ ಸಂಘಗಳಲ್ಲಿ ಕಡಲೆ ಕಾಳು ಖರೀದಿ ಜರುಗಲಿದೆ. ಕಡಳೆಕಾಳು ಮಾರಾಟ ಮಾಡಿದ ರೈತರಿಗೆ ನೇರವಾಗಿ ಖಾತೆಗಳಿಗೆ ಹಣ ಜಮೆ ಮಾಡಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.