ಸಿರಿಗೆರೆ: ‘ದೇಶಕ್ಕೆ ಸ್ಥಿರ ಸರ್ಕಾರದ ಅಗತ್ಯವಿತ್ತು, ದೇಶಭಕ್ತರು ಅಧಿಕಾರ ನೀಡಿದ್ದಾರೆ. ಅಂತೆಯೇ ಚುನಾವಣೆಯ ಸಂದರ್ಭದಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಬಿಜೆಪಿ ಬದ್ಧ’ ಎಂದು ಸಂಸದ ಎ.ನಾರಾಯಣಸ್ವಾಮಿ ತಿಳಿಸಿದರು.
ಶನಿವಾರ ಇಲ್ಲಿನ ಬೃಹನ್ಮಠದ ಐಕ್ಯಮಂಟಪಕ್ಕೆ ಭೇಟಿ ನೀಡಿ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದು ಮಾತನಾಡಿದರು.
‘ಚಿತ್ರದುರ್ಗ ಕ್ಷೇತ್ರಕ್ಕೆ ಮೊದಲು ನೀರಿನ ಸಮಸ್ಯೆ ಬಗೆಹರಿಸುವ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳು, ಕ್ಷೇತ್ರದ ಶಾಸಕರು ಹಾಗೂ ಗ್ರಾಮದ ಮುಖಂಡರಲ್ಲಿ ಚರ್ಚಿಸಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದರು.
ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ‘ಎಲ್ಲ ಸಮುದಾಯದವರು ಸಮಾಜಕ್ಕೆ ತಲೆಬಾಗಿ ನಡೆಯಬೇಕು. ಸಮಾಜದ ಒಳಿತಿಗಾಗಿ ನಿಮ್ಮ ಕಾರ್ಯವನ್ನು ಮುಡಿಪಾಗಿಡಬೇಕು’ ಎಂದು ಕಿವಿಮಾತು ಹೇಳಿದರು.
ಶಾಸಕ ಎಂ.ಚಂದ್ರಪ್ಪ, ಡಿ.ವಿ.ಶರಣಪ್ಪ, ತಿಪ್ಪೇಸ್ವಾಮಿ, ಮಹೇಶ್ವರಪ್ಪ, ಲಿಂಗರಾಜ್, ಇಂದ್ರಪ್ಪಗೌಡ, ಕೋಗುಂಡೆ ಮಂಜಣ್ಣ, ಸಿರಿಗೆರೆ ಮೋಹನ್, ಹಳವುದರ ತಿಪ್ಪೇಸ್ವಾಮಿ, ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಎಸ್.ಬಿ.ರಂಗನಾಥ್ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.