ಚಿತ್ರದುರ್ಗ: ಇಲ್ಲಿನ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ (ಕೆಒಎಫ್) ಸಿಬ್ಬಂದಿಗೆ ಚಾಕುತೋರಿಸಿ ಬೆದರಿಸಿ ₹ 6.5 ಲಕ್ಷ ದರೋಡೆ ಮಾಡಿದ ಘಟನೆ ನಗರದ ಐಯುಡಿಪಿ ಬಡಾವಣೆಯಲ್ಲಿ ಶನಿವಾರ ನಡೆದಿದೆ.
ಕೆಒಎಫ್ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಪ್ರಶಾಂತ್ ಎಂಬುವರರನ್ನು ದರೋಡೆ ಮಾಡಲಾಗಿದೆ.
ಶುಕ್ರವಾರ ಸಂಗ್ರಹವಾಗಿದ್ದ ಹಣವನ್ನು ಪ್ರಶಾಂತ್ ಅವರು ಶನಿವಾರ ಬೆಳಿಗ್ಗೆ ಕಚೇರಿಗೆ ತೆಗೆದುಕೊಂಡು ಹೊರಟಿದ್ದರು. ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ ನಾಲ್ವರು, ಚಾಕು ತೋರಿಸಿ ಬೆದರಿಸಿದ್ದಾರೆ. ಹಣದ ಬ್ಯಾಗ್ ಕಿತ್ತು ಪರಾರಿಯಾಗಿದ್ದಾರೆ ಎಂದು ಬಡಾವಣೆ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.