ಚಳ್ಳಕೆರೆ: ರೈತರ ಬೇಡಿಕೆ ಹಾಗೂ ನಿರೀಕ್ಷೆಗೆ ತಕ್ಕಂತೆ ಎಂಆರ್ಪಿ ದರದಲ್ಲೇ ಗುಣಮಟ್ಟದ ಕೃಷಿ ಪರಿಕರಗಳನ್ನು ರೈತರಿಗೆ ಒದಗಿಸಬೇಕು. ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಬಬ್ಬೂರು ಫಾರಂ ಸಹಾಯಕ ಕೃಷಿ ನಿರ್ದೇಶಕ ಡಾ. ಪ್ರವೀಣ್ ಚೌಧರಿ ಎಚ್ಚರಿಸಿದರು.
ಇಲ್ಲಿನ ಕೃಷಿ ಇಲಾಖೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೃಷಿ ಪರಿಕರ ಮಾರಾಟಗಾರರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಮೊಳಕಾಲ್ಮೂರು ಹಾಗೂ ಚಳ್ಳಕೆರೆ ರೈತ ಸಮುದಾಯದ ತೀರಾ ಹಿಂದುಳಿದಿದೆ. ಬೆಳೆ ವಿಮೆ ಪರಿಹಾರದಿಂದಲೇ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರಾಟ ಮಾಡಿದ ಪರಿಕರಗಳ ಗಣಕೀಕೃತ ದಾಖಲೆಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಗುಣಮಟ್ಟದ ರಸ ಗೊಬ್ಬರವನ್ನು ವಿತರಿಸುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಲೋಕೇಶಪ್ಪ ಹೇಳಿದರು.
ಉಪ ಕೃಷಿ ನಿರ್ದೇಶಕ ಡಾ.ಶಿವಕುಮಾರ್, ಕೃಷಿ ಪರಿಕರ ಮಾರಾಟಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಆನಂದ, ಕೃಷಿ ತಾಂತ್ರಿಕ ಅಧಿಕಾರಿ ರವಿಕುಮಾರ್, ನಾಗರಾಜ, ಓಬಣ್ಣ, ರೈತ ಮುಖಂಡ ಮಹೇಶ್, ರಾಜಣ್ಣ ಇದ್ದರು.