ಚಳ್ಳಕೆರೆ: ಬುದ್ಧ, ಬಸವ,ಅಂಬೇಡ್ಕರ್ ನಾಡಿನಲ್ಲಿ ಪುರಾಣಗಳ ಬಗೆಗಿನ ನಂಬಿಕೆ ಸಲ್ಲದು ಎಂದು ಪ್ರೊ.ಸಿ.ಕೆ. ಮಹೇಶ್ ಹೇಳಿದರು.
ಗಾಂಧಿನಗರದಲ್ಲಿ ಭಾನುವಾರ ನಡೆದ ‘ನವಯಾನ ಧಮ್ಮಪಥದ ಮತ್ತು ಕ್ರಾಂತಿ ಮತ್ತು ಪ್ರತಿಕ್ರಾಂತಿ ಕೃತಿಯ ರಾಮಕೃಷ್ಣರ ಅಧ್ಯಯನ ಅವಲೋಕನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಾಲ್ಮೀಕಿ ರಾಮಾಯಣದಲ್ಲಿ ತಳ ಸಮುದಾಯದ ಚಿಂತನೆಗಳಿರುವ ಕಾರಣ ಸಂಘ ಪರಿವಾರದವರು ಆ ರಾಮನನ್ನು ಮರೆಮಾಚುವ ಹುನ್ನಾರ ನಡೆಸುತ್ತಿದ್ದಾರೆ. ವೈದಿಕ ಸಂಸ್ಕೃತಿಯ ರಾಮನನ್ನು ವೈಭವೀಕರಿಸುತ್ತಿದ್ದಾರೆ ಎಂದು ಹೇಳಿದರು.
ಸಾಮಾಜಿಕ ಚಿಂತಕ ಕಸವನಹಳ್ಳಿ ಶಿವಣ್ಣ, ‘ಅಂಬೇಡ್ಕರ್ ಅವರ ವಿಚಾರಧಾರೆ, ನವಯಾನ ಧಮ್ಮವನ್ನು 21 ವಾರಗಳ ಕಾಲ ಸರಣಿಯ ರೀತಿಯಲ್ಲಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ.ವೈಚಾರಿಕ ಮೌಲ್ಯಗಳನ್ನು ಒಳಗೊಂಡ ಬುದ್ಧನ ತ್ರಿಪಿಟಿಕಗಳು ಹಾಗೂ ಅಷ್ಟಾಂಗ ಮಾರ್ಗದ ತತ್ವಗಳನ್ನು ಪ್ರತಿಯೊಬ್ಬರೂ ಅನುಸರಿಸುವ ಮೂಲಕ ಉತ್ತಮವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು’ ಎಂದು ಹೇಳಿದರು.
ವಿಮರ್ಶಕ ಡಾ.ಡಿ. ಶ್ರೀನಿವಾಸರಾಜು, ಸಿ.ಎ. ಚಿಕ್ಕಣ್ಣ, ಬುದ್ಧ ವೇದಿಕೆ ಅಧ್ಯಕ್ಷ ಮೈತ್ರಿ ದ್ಯಾಮಣ್ಣ, ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಆರ್. ಮಾರುತೇಶ್, ಕೊರ್ಲಕುಂಟೆ ತಿಪ್ಪೇಸ್ವಾಮಿ, ಉಮೇಶ್ ಚಂದ್ರ ಬ್ಯಾನರ್ಜಿ ಇದ್ದರು.